ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ಮೂರು ತಿಂಗಳಿನಿಂದ ಸಂಬಳವೇ ಆಗಿಲ್ಲ. ಈ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿಪಕ್ಷ ನಾಯಕ ಆರ್ ಅಶೋಕ್ ಇದು ಪಾಪರ್ ಸರ್ಕಾರ ಎಂದಿದ್ದಾರೆ.
ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಈಗ ಹೆಚ್ಚು ಮಾಡುವುದು ಬಿಡಿ ಬರಬೇಕಾದ ವೇತನವೇ ಬಂದಿಲ್ಲ. ಈ ಬಗ್ಗೆ ಮಾಧ್ಯಮ ವರದಿಗಳ ಬೆನ್ನಲ್ಲೇ ಆರ್ ಅಶೋಕ್ ಇನ್ನೆಷ್ಟುದಿನ ಈ ಭಂಡ ಬಾಳು ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದಿದ್ದಾರೆ.
ಆಶಾ ಕಾರ್ಯಕರ್ತೆಯರ ಗೌರವಧನವನ್ನ ₹8,000ಕ್ಕೆ ಹೆಚ್ಚಳ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಬೊಗಳೆ ಬಿಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ, ಗೌರವಧನ ಹೆಚ್ಚಿಸುವುದಿರಲಿ, ಕಳೆದ ಮೂರು ತಿಂಗಳಿಂದ ಕೊಡಬೇಕಾದ ಗೌರವಧನವನ್ನೂ ಕೊಟ್ಟಿಲ್ಲ.
ಸಿಎಂ ಸಿದ್ದರಾಮಯ್ಯನವರೇ, ವಿಪಕ್ಷಗಳು ಸರ್ಕಾರ ದಿವಾಳಿ ಆಗಿದೆ ಎಂದು ಟೀಕೆ ಮಾಡಿದಾಗಲೆಲ್ಲ ಎಲ್ಲ ಸರಿಯಿದೆ ಎಂದು ತಿಪ್ಪೆ ಸಾರಿಸುವ ಮಾತಾಡುತ್ತೀರಲ್ಲ ಸ್ವಾಮಿ, ಸರ್ಕಾರ ಪಾಪರ್ ಆಗಿಲ್ಲ ಎನ್ನುವುದಾದರೆ 42,000 ಆಶಾ ಕಾರ್ಯಕರ್ತೆಯರಿಗೆ ಸಿಗಬೇಕಾದ ₹63 ಕೋಟಿ ರೂಪಾಯಿ ಗೌರವಧನ ಯಾಕೆ ಬಾಕಿ ಉಳಿಸಿಕೊಂಡಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ.