ಬೆಂಗಳೂರು: ಮತಗಳ್ಳತನ ಎಂದು ಆರೋಪ ಮಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ನಡೆಯುತ್ತಿರುವ ತೆರಿಗೆ ವಂಚನೆ ಬಗ್ಗೆಯೂ ಮಾತನಾಡಲಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಕರ್ನಾಟಕದಲ್ಲಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಆದರೆ ರಸ್ತೆ ಮಾತ್ರ ರಿಪೇರಿಯಾಗುತ್ತಿಲ್ಲ. ರಾಹುಲ್ ಗಾಂಧಿಯವರೇ ಕರ್ನಾಟಕದಲ್ಲಿ ನಡೆಯುತ್ತಿರುವ "ತೆರಿಗೆ ಕಳ್ಳತನ"ದ ಬಗ್ಗೆ ಯಾವಾಗ ಮಾತನಾಡುತ್ತೀರಿ?
"ಕೆಲಸಕ್ಕೆ ಕರೀಬೇಡಿ ಊಟಕ್ಕೆ ಮಾತ್ರ ಮರೀಬೇಡಿ" ಎನ್ನುವಂತೆ ಕರ್ನಾಟಕದಲ್ಲಿರುವ ನಿಮ್ಮ ಕಾಂಗ್ರೆಸ್ ಸರ್ಕಾರ ತೆರಿಗೆ ವಸೂಲಿಗೆ ಮಾತ್ರ ಜೈ, ರಸ್ತೆ ಗುಂಡಿ ಮುಚ್ಚಲು ಬೈ ಬೈ ಎನ್ನುತ್ತಿದೆ ಎಂದು ಅಶೋಕ್ ಟೀಕಾ ಪ್ರಹಾರ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿರ್ಲಕ್ಷ್ಯಕ್ಕೆ ಬೆಂಗಳೂರಿನ ನಾಗರಿಕರು ಬೇಸತ್ತು ಈಗ “ಈ ತೆರಿಗೆ ಕಳ್ಳತನ ನಿಲ್ಲಿಸಿ! ಬೆಂಗಳೂರಿನ ರಸ್ತೆಗುಂಡಿಗಳನ್ನು ನಾವೇ ಮುಚ್ಚುತ್ತೇವೆ ಎನ್ನುತ್ತಿದ್ದಾರೆ."
ನಮ್ಮ ತೆರಿಗೆ ಕಳ್ಳತನ ನಿಲ್ಲಿಸುವವರೆಗೂ ನಮ್ಮ ತೆರಿಗೆ ಸಂಗ್ರಹಣೆ ನಿಲ್ಲಿಸಿ! ಕೆಲಸ ಮಾಡದಿದ್ದರೆ ನಮ್ಮ ಬಳಿ ತೆರಿಗೆ ವಸೂಲಿ ಮಾಡಬೇಡಿ ಎಂದು ನಾಗರೀಕರು ರಾಜ್ಯದ ಮುಖ್ಯಮಂತ್ರಿಯೊಬ್ಬರಿಗೆ ಪತ್ರ ಬರೆದಿರುವುದು ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು. ಇದೇನಾ ರಾಹುಲ್ ಗಾಂಧಿ ಅವರೇ ನಿಮ್ಮ "ಕರ್ನಾಟಕ ಮಾಡೆಲ್"? ಈ ಸಾಧನೆಗೆ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಲಂಡನ್ ಬುಕ್ ಆಫ್ ರೆಕಾರ್ಡ್ ಅಲ್ಲ, ಗಿನ್ನಿಸ್ ರೆಕಾರ್ಡ್ ಗೌರವ ಸಿಗಲೇಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.