ಮೆಟ್ರೋ ನಮ್ದು ಎಂದು ಬಿಜೆಪಿಯವರು ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಾರೆ: ರಾಮಲಿಂಗಾ ರೆಡ್ಡಿ

Krishnaveni K

ಶನಿವಾರ, 9 ಆಗಸ್ಟ್ 2025 (15:24 IST)
ಬೆಂಗಳೂರು: ಭಾನುವಾರ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಯಾಗುತ್ತಿದೆ. ಆದರೆ ನಿನ್ನೆ ಬಿಜೆಪಿ ನಾಯಕರಾದ ವಿಜಯೇಂದ್ರ, ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಸಂಸದರು ಇಡೀ ಮೆಟ್ರೋ ಯೋಜನೆಯನ್ನು ಬಿಜೆಪಿ ಕೇಂದ್ರವೇ ಮಾಡಿರುವಂತೆ ಪ್ರಚಾರ ಪಡೆಯುತ್ತಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ‘ಇವರಿಗೆ ಮೆಟ್ರೋ ಆರಂಭವಾಗಿದ್ದು ಯಾವಾಗ ಎಂಬ ಇತಿಹಾಸವೇ ಗೊತ್ತಿಲ್ಲ. 2006ರಲ್ಲಿ ಧರಂ ಸಿಂಗ್ ಅವರು ಸಿಎಂ ಆಗಿದ್ದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಶಂಕುಸ್ಥಾಪನೆ ಮಾಡಿದರು. ಮೆಟ್ರೋ ಸಂಸ್ಥೆ ಜನರ ಸಂಸ್ಥೆ ಯಾವುದೇ ಪಕ್ಷದ ಸ್ವತ್ತಲ್ಲ. ಬಿಜೆಪಿಯವರಿಗೆ ಕೆಲಸಕ್ಕಿಂತ ಪ್ರಚಾರದ ಹುಚ್ಚು ಜಾಸ್ತಿ. ಏನೂ ಮಾಡದಿದ್ದರೂ ಪ್ರಚಾರ ಪಡೆಯುತ್ತಾರೆ. ಬೇರೆಯವರ ಕೆಲಸವನ್ನು ನಾವೇ ಮಾಡಿದ್ದಾಗಿ ಹೇಳುತ್ತಾರೆ.

ಈ ಯೋಜನೆಯಲ್ಲಿ ರಾಜ್ಯ ಸರ್ಕಾರ ಸಣ್ಣ ಪಾಲುದಾರನಲ್ಲ. ಈ ಯೋಜನೆಯಲ್ಲಿ ರಾಜ್ಯ ಸರ್ಕಾರವೇ ದೊಡ್ಡ ಪಾಲುದಾರರು. ಮೆಟ್ರೋ ಯೋಜನೆಯ ಫೇಸ್ 1ನಲ್ಲಿ ಕರ್ನಾಟಕ ಸರ್ಕಾರ - 30% (ಜಮೀನೂ ಸೇರಿ), ಕೇಂದ್ರ- 25%, ಉಳಿದ 45% ಸಾಲದ ರೂಪದಲ್ಲಿ  ಮೆಟ್ರೋ ಸಂಸ್ಥೆ ಪಡೆಯಲಾಗಿತ್ತು. ಫೇಸ್ 2ನಲ್ಲಿ ಕರ್ನಾಟಕ 30% + ಜಮೀನು ಮತ್ತು ಮಿತಿಮೀರಿದ ವೆಚ್ಚದ ಬಹುತೇಕ ಭಾಗ ರಾಜ್ಯ ಸರ್ಕಾರದ್ದಾಗಿದೆ. ಇಲ್ಲಿ ಕೇಂದ್ರದ ಪಾಲು ಕೇವಲ 20% ಮಾತ್ರ. ಉಳಿದ 50% ಮೊತ್ತವನ್ನು ಮೆಟ್ರೋ ಸಂಸ್ಥೆ ಸಾಲ ಪಡೆದಿದೆ. ಫೇಸ್ 3ರಲ್ಲಿ ಕರ್ನಾಟಕ 20% ಅನುದಾನ ಹಾಗೂ ಸಂಪೂರ್ಣ ಜಮೀನು ಮತ್ತು ಪುನರ್ವಸತಿ ವೆಚ್ಚ, ಕೇಂದ್ರ ಸರ್ಕಾರ 20% ಹಾಗೂ ಉಳಿದ 60% ಅನುದಾನವನ್ನು ಸಂಸ್ಥೆ ಸಾಲವಾಗಿ ಪಡೆದಿದೆ. ಮೆಟ್ರೋ ಸಂಸ್ಥೆ ಪಡೆದಿರುವ ಸಾಲಕ್ಕೆ ಗ್ಯಾರಂಟಿ ಹಾಕಿರುವುದು ರಾಜ್ಯ ಸರ್ಕಾರ. ಮೆಟ್ರೋ ಸಂಸ್ಥೆ ಇದನ್ನು ಪಾವತಿಸದಿದ್ದರೆ ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ.

ಪ್ರತಿ ಹಂತದಲ್ಲೂ ಕರ್ನಾಟಕ ಸರ್ಕಾರ ಜಮೀನಿಗಾಗಿ ದೊಡ್ಡ ಮೊತ್ತ ಹಾಕುತ್ತದೆ ಮತ್ತು ಯೋಜನೆಗಳನ್ನು ಮುನ್ನಡೆಸಲು ನಿರಂತರವಾಗಿ ಹಣ ನೀಡುತ್ತದೆ ಅನೇಕ ಬಾರಿ ಕೇಂದ್ರದಷ್ಟು ಅಥವಾ ಅದಕ್ಕಿಂತ ಹೆಚ್ಚು. ಈ ವಿಚಾರದಲ್ಲಿ ಬೇರೆ ರಾಜ್ಯದವರು ಅಪಪ್ರಚಾರ ಮಾಡಿದರೆ ಒಂದು ಲೆಕ್ಕ. ಆದರೆ ನಮ್ಮದೇ ರಾಜ್ಯದ ನಾಯಕರು ಈ ರೀತಿ ಮಾತನಾಡುತ್ತಿದ್ದಾರೆ. ಈ ಯೋಜನೆಯಲ್ಲಿ ರಾಜ್ಯದ ಪಾಲು ಇಲ್ಲವೇ?.

ಇತ್ತೀಚೆಗೆ ತೇಜ್ಸ್ವಿ ಸೂರ್ಯ ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇವಲ 6 ಕಿ.ಮೀ ಮಾತ್ರ ಮೆಟ್ರೋ ಆಗಿತ್ತು ಎಂದು ಹೇಳಿದ್ದರು ಆದರೆ ಮೊದಲ ಹಂತದ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ 42 ಕಿ.ಮೀ ಯೋಜನೆ ಮಾಡಲಾಯಿತು. ಆರಂಭದಲ್ಲಿ 6,395 ಕೋಟಿ ಅಂದಾಜು ಮಾಡಲಾಗಿತ್ತಾದರೂ ನಂತರ ಅದು 14,405 ಕೋಟಿಗೆ ಏರಿಕೆಯಾಯಿತು. ಮೆಟ್ರೋ ಒಟ್ಟಾರೆ ಕಾಮಗಾರಿಯಲ್ಲಿ ರಾಜ್ಯ ಸರ್ಕಾರ 24064.30 ಕೋಟಿ ನೀಡಿದರೆ, ಕೇಂದ್ರ ಸರ್ಕಾರ ನೀಡಿರುವುದು 17803.85 ಕೋಟಿ, 43,5498.53 ಕೋಟಿ ಸಾಲ ಮಾಡಲಾಗಿದೆ.

ರಾಜ್ಯ ಸರ್ಕಾರದಿಂದ ವಿಳಂಬ ಎಂದು ಆರೋಪ ಮಾಡುವ ಬಿಜೆಪಿ ನಾಯಕರು ಎಂದಾದರೂ ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ ಎಂದು ವಿಚಾರಿಸಿದ್ದಾರಾ? ಸಭೆ ಮಾಡಿದ್ದಾರಾ, ಚರ್ಚೆ ಮಾಡಿದ್ದಾರಾ?

ಇನ್ನು 15ನೇ ಹಣಕಾಸು ಆಯೋಗವು ಫೆರಿಪೆರಲ್ ರಿಂಗ್ ರೋಡ್ ಅಭಿವೃದ್ಧಿಗೆ, ಕೆರೆಗಳ ಅಭಿವೃದ್ಧಿ ಹಾಗೂ ಇತರೆ ವಿಶೇಷ ಅನುದಾನಕ್ಕೆ ಮೀಸಲಿರಿಸಿದ್ದ 11,495 ಕೋಟಿ ಹಣವನ್ನು ರಾಜ್ಯಕ್ಕೆ ನೀಡದೆ ಮೋಸ ಮಾಡಲಾಗಿದೆ. ಇದರ ಬಗ್ಗೆ ರಾಜ್ಯದ ಸಂಸದರು ಸಂಸತ್ತಿನಲ್ಲಿ ಮಾತನಾಡುವುದಿಲ್ಲ. ನಮ್ಮ ರಾಜ್ಯಕ್ಕೆ ಬರಬೇಕಾದ ಪಾಲು ಕೊಡಿ ಎಂದು ಹೇಳಲು ಇವರಿಗೆ ಬಾಯಿ ಬರುವುದಿಲ್ಲ. ಇಲ್ಲಿ ಬಂದು ರಾಜ್ಯ ಸರ್ಕಾರದ ವಿರುದ್ಧ ಮಾತನಾಡುತ್ತಾರೆ.

ವಿಳಂಬದಿಂದಾಗಿ 1 ಕಿ.ಮೀ 400 ಕೋಟಿ ನಷ್ಟವಾಗಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರದ ಜವಾಬ್ದಾರಿ ಇದೆಯೋ ಇಲ್ಲವೋ? ಬೋಗಿಗಳು ಬರುವುದು ತಡವಾಗಿರುವುದು ಯಾರಿಂದ? ಪರಿಸರ ಇಲಾಖೆ ಅನುಮತಿ ನೀಡುವವರು ಯಾರು? ಎಲ್ಲ ಅನುಮತಿ ಕೇಂದ್ರ ಸರ್ಕಾರವಲ್ಲವೇ? ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದ ನಂತರ ಈ ಅನುಮತಿಗಳನ್ನು ಪಡೆಯಬೇಕು. ಇನ್ನು ಮಾರ್ಗ ಸುರಕ್ಷತೆ ಪ್ರಮಾಣ ಪತ್ರ ನೀಡುವವರು ಕೇಂದ್ರ ಸರ್ಕಾರ. ಹೀಗಾಗಿ ಈ ವಿಳಂಬಕ್ಕೆ ಕಾರಣ ಕೇಂದ್ರ ಸರ್ಕಾರ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಬೇಕಂತಲೇ ತಡ ಮಾಡಿ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಇವರು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಅನುಮತಿ ಕೊಡಿಸಬೇಕಿತ್ತು. ನಮ್ಮ ಮುಖ್ಯಮಂತ್ರಿಗಳು ಸಂಬಂಧಪಟ್ಟ ಸಚಿವರಿಗೆ ಒತ್ತಡ ಹಾಕಿದ್ದಾರೆ” ಎಂದು ತಿಳಿಸಿದರು.

ತಾಂತ್ರಿಕ ಸಮಸ್ಯೆಯನ್ನು ನಾನೇ ಖುದ್ದಾಗಿ ಬಗೆಹರಿಸಿದ್ದೇನೆ ಎಂದು ತೇಜಸ್ವಿ ಸೂರ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇವರೇ ಖುದ್ದಾಗಿ ಬಗೆಹರಿಸಿದ್ದರೆ ಈ ಯೋಜನೆ ತಡವಾಗಿದ್ದು ಯಾಕೆ? ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಕೇಂದ್ರದ ತಪ್ಪು ಇಟ್ಟುಕೊಂಡು ನಮ್ಮ ಮೇಲೆ ಹೇಳುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜೊತೆಯಾಗಿ ಸಾಗಬೇಕು. ಅದನ್ನು ಬಿಟ್ಟು ಎಲ್ಲವನ್ನೂ ನಾವೇ ಮಾಡಿದ್ದೇವೆ, ರಾಜ್ಯ ಸರ್ಕಾರ ಏನೂ ಮಾಡಿಲ್ಲ ಎಂದು ಹೇಳುವುದು ಸರಿಯೇ? 17 ಸಾವಿರ ಕೋಟಿ ಕೊಟ್ಟು ಎಲ್ಲವೂ ನಮ್ಮದೇ ಎಂದು ಹೇಳುತ್ತಾರೆ” ಎಂದು ತಿಳಿಸಿದರು.

ಭೂಸ್ವಾಧೀನ ಪ್ರಕ್ರಿಯೆ ಸಮಸ್ಯೆಯಾದಾಗ ನಾವು ಬಗೆಹರಿಸಿದ್ದೇವೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಭೂಸ್ವಾಧೀನ ಪ್ರಕ್ರಿಯೆಗೂ ಅವರಿಗೂ ಏನು ಸಂಬಂಧ? ಇದು ರಾಜ್ಯ ಸರ್ಕಾರದ ಕೆಲಸ. ಕೇಂದ್ರ ಸರ್ಕಾರ ಅಥವಾ ರಕ್ಷ್ಣಾ ಇಲಾಖೆ ಜಾಗ ಇದ್ದರೆ ಅದನ್ನು ಬಿಟ್ಟುಕೊಡುತ್ತಾರೆ. ಇದರ ಹೊರತಾಗಿ ಭೂಸ್ವಾಧೀನ ಪ್ರಕ್ರಿಯೆ ರಾಜ್ಯ ಸರ್ಕಾರದ ಕೆಲಸ. ರೈಲ್ವೇ ಇಲಾಖೆ ಎಲ್ಲಾ ಯೋಜನೆಗಳಲ್ಲಿ ರಾಜ್ಯ ಸರ್ಕಾರ ಜಮೀನು ಹಾಗೂ ವೆಚ್ಚದ 50% ಪಾಲು ಇರುತ್ತದೆ. ಆದರೆ ಬಾವುಟ ಹಾರಿಸಲು ದೆಹಲಿಯಿಂದ ಬರುತ್ತಾರೆ. ರಾಜ್ಯ ಸರ್ಕಾರಕ್ಕೆ ಆಹ್ವಾನವಿರುವುದಿಲ್ಲ” ಎಂದು ತಿಳಿಸಿದರು.

ನಾಳಿನ ಕಾರ್ಯಕ್ರಮಕ್ಕೆ ಆಹ್ವಾನ ಇದೆಯೇ ಎಂದು ಕೇಳಿದಾಗ, “ಶಿಷ್ಟಾಚಾರದ ಪ್ರಕಾರ ಎಲ್ಲರಿಗೂ ಆಹ್ವಾನವಿರುತ್ತದೆ. ಸಿಎಂ, ಡಿಸಿಎಂ, ಸಚಿವರಿಗೆ ಆಹ್ವಾನ ಇದೆ. ನನ್ನ ಕ್ಷೇತ್ರದಲ್ಲಿ ಬರುವ ಹಿನ್ನೆಲೆಯಲ್ಲಿ ನನಗೂ ಆಹ್ವಾನ ನೀಡುತ್ತಾರೆ” ಎಂದು ತಿಳಿಸಿದರು.

ಟಿಕೆಟ್ ದರ ವಿಚಾರದಲ್ಲಿ ಪರಸ್ಪರ ಆರೋಪದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನಾನು ಈಗಾಗಲೇ ಮಾಧ್ಯಮಗೋಷ್ಠಿ ಮಾಡಿದ್ದೆ. ಕೇಂದ್ರ ಸರ್ಕಾರ ಟಿಕೆಟ್ ದರ ಹೆಚ್ಚಳಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುತ್ತದೆ. ಅವರ ವರದಿ ಅನುಮೋದನೆ ಆಗುವುದು ದೆಹಲಿ ಮೆಟ್ರೋ ಮಂಡಳಿಯಲ್ಲಿ. ಇದರ ಮುಖ್ಯಸ್ಥರು ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಪ್ರಿನ್ಸಿಪಲ್ ಸೆಕರೇಟರಿ. ಬಿಜೆಪಿಯವರು ಸುಳ್ಳು ಹೇಳುವುದು ಹೆಚ್ಚು, ಕಾಂಗ್ರೆಸ್ ನವರು ಇಂತಹ ವಿಚಾರದಲ್ಲಿ ಮಾತನಾಡದಿದ್ದಾಗ ಬಿಜೆಪಿ ಹೇಳಿದ ಸುಳ್ಳುಗಳೇ ಜನರಿಗೆ ಸತ್ಯವಾಗಿ ಕಾಣುತ್ತದೆ” ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ