ಪಾದಚಾರಿಗೆ ಡಿಕ್ಕಿ ಹೊಡೆದು ಆರೋಪಿ ಪರಾರಿ

ಭಾನುವಾರ, 10 ಅಕ್ಟೋಬರ್ 2021 (21:44 IST)
ಬೆಂಗಳೂರು: ಪಾದಚಾರಿಗೆ ಡಿಕ್ಕಿ ಹೊಡೆದು ಆರೋಪಿ ಪರಾರಿಯಾಗಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಸುಮಾರು 58 ಸಿಸಿ ಕ್ಯಾಮರಾ ಪರಿಶೀಲನೆ ಬಳಿಕ ಆರೋಪಿ ಮತ್ತು ಆತನ ಕಾರನ್ನು ಪತ್ತೆ ಹಚ್ಚಿದ್ದಾರೆ.
ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ತೂರಿ ನಗರ 2ನೇ ಮುಖ್ಯರಸ್ತೆಯಲ್ಲಿ ಪಾದಚಾರಿಗೆ ಡಿಕ್ಕಿ ಹೊಡೆದ ಬಳಿಕ ಕಾರು ಸಹಿತ ಚಾಲಕ ಪರಾರಿಯಾಗಿದ್ದ. ಬಳಿಕ ಗಾಯಾಳುವನ್ನು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಮೃತಪಟ್ಟಿದ್ದ. ಈ ಸಂಬಂಧ ಕೆ.ಆರ್.ಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು.
ಮೃತನ ಕುಟುಂಬಕ್ಕೆ ನ್ಯಾಯ ಕೊಡಿಸಲು ಸಾಕಷ್ಟು ಪರಿಶ್ರಮ ಪಟ್ಟು ಸುಮಾರು 58 ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿ ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಮಹಮದ್ ಎಂ.ಎ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಅಪಘಾತದ ನಂತರ ಚಾಲಕ ಹಲವು ರಸ್ತೆಗಳಲ್ಲಿ ಸಂಚರಿಸಿ ಒಂದು ಜೆರಾಕ್ಸ್ ಅಂಗಡಿಗೆ ತೆರಳಿ ಅಲ್ಲಿ ಯಾವುದೋ ದಾಖಲಾತಿಗಳನ್ನು ಜೆರಾಕ್ಸ್ ಮಾಡಿಸಿಕೊಂಡ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಅಂಗಡಿಯಲ್ಲಿ ವಿಚಾರಿಸಿದಾಗ ಆರೋಪಿಯ ಭಾವಚಿತ್ರ ಲಭ್ಯವಾಗಿದೆ. ಭಾವಚಿತ್ರವನ್ನು ಸ್ಥಳೀಯ ಗ್ಯಾಸ್, ಹಾಲು, ಪತ್ರಿಕೆ ವಿತರಕ ಹುಡುಗರು ಮತ್ತು ಇತರ ಸಾರ್ವಜನಿಕರಿಗೆ ತೋರಿಸಿದಾಗ ಆರೋಪಿಯ ಮಾಹಿತಿ ಲಭ್ಯವಾಗಿದೆ.
ನಂತರ ವಿಳಾಸ ಪಡೆದುಕೊಂಡು ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ ನಂತರ, ಚಾಲಕ ನೇರವಾಗಿ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದು ಠಾಣೆಗೆ ಹಾಜರಾಗಿದ್ದಾರೆ. ಆರೋಪಿಯನ್ನು ಶ್ರೀಧರ್ ಎಂದು ಗುರುತಿಸಲಾಗಿದೆ.
ಆರೋಪಿ ಶ್ರೀಧರ್​ ಎಚ್‍ಎಎಲ್ ನಿವೃತ್ತ ನೌಕರನಾಗಿದ್ದು, ಅಪಘಾತದ ದಿನ ವಿಪರೀತ ಮಳೆ ಇದ್ದುದರಿಂದಾಗಿ ಕಾರು ನಿಲ್ಲಿಸದೇ ಹೊರಟು ಹೋಗಿರುವುದಾಗಿ ಪೊಲೀಸರ ಮುಂದೆ ತಪ್ಪೊಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಕೆ.ಆರ್.ಪುರ ಸಂಚಾರಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ