ಚಂಪೈ ಸೊರೇನ್‌ ಬಿಜೆಪಿ ಕದ ತಟ್ಟಿದ ಬೆನ್ನಲ್ಲೇ ಜಾರ್ಖಂಡ್‌ ಸಂಪುಟದಲ್ಲಿ ಕ್ಷೀಪ್ರ ಬದಲಾವಣೆ

Sampriya

ಶುಕ್ರವಾರ, 30 ಆಗಸ್ಟ್ 2024 (14:07 IST)
Photo Courtesy X
ರಾಂಚಿ: ಜಾರ್ಖಂಡ್ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ ನಡೆದಿದೆ. ಕ್ಷೀಪ್ರ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಶಾಸಕ ರಾಮ್‌ದಾಸ್ ಸೊರೇನ್ ಇಂದು ಪ್ರಮಾಣವಚನ ಸ್ವೀಕರಿಸಿದರು.

ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವ ಚಂಪೈ ಸೊರೇನ್ ಅವರು ಬಿಜೆಪಿಯ ಕದ ತಟ್ಟಿದ ಬೆನ್ನಲ್ಲೇ ಅವರ ಸ್ಥಾನಕ್ಕೆ ರಾಮ್‌ದಾಸ್ ಆಯ್ಕೆಯಾಗಿದ್ದಾರೆ. ರಾಜಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಮ್‌ದಾಸ್ ಅವರಿಗೆ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಪ್ರತಿಜ್ಞಾವಿಧಿ ಬೋಧಿಸಿದರು.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದ ಹೇಮಂತ್ ಸೊರೇನ್ ಜನವರಿ 31ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಐದು ತಿಂಗಳ ಬಳಿಕ ಅವರು ಜೂನ್ 28ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.

ಫೆಬ್ರುವರಿ 2ರಂದು ಚಂಪೈ ಸೊರೇನ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. ಜುಲೈ 3ರಂದು ರಾಜೀನಾಮೆ ಸಲ್ಲಿಸಿದ್ದರು. ಜೈಲಿನಿಂದ ಬಿಡುಗಡೆಯಾಗಿದ್ದ ಹೇಮಂತ್ ಸೊರೇನ್ ಜುಲೈ 4ರಂದು ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಮತ್ತೊಂದೆಡೆ ಪಕ್ಷ ತೊರೆದಿರುವ ಚಂಪೈ ಸೊರೇನ್, ಬಿಜೆಪಿಗೆ ಸೇರುವುದು ಬಹುತೇಕ ಖಚಿತವೆನಿಸಿದೆ. ಮೂಲಗಳ ಪ್ರಕಾರ ಅವರು ಇಂದೇ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ