ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಸ್ಥಿತಿ ಗಂಭೀರವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮೂರನೇ ಏಕದಿನ ಪಂದ್ಯದ ವೇಳೆ ಅಲೆಕ್ಸ್ ಕ್ಯಾರಿ ನೀಡಿದ ಕಷ್ಟಕರ ಕ್ಯಾಚ್ ಪಡೆಯುವ ಯತ್ನದಲ್ಲಿ ಶ್ರೇಯಸ್ ಅಯ್ಯರ್ ಅನಾಮತ್ತಾಗಿ ನೆಲಕ್ಕೆ ಬಿದ್ದಿದ್ದರು. ಈ ವೇಳೆ ಅವರ ಪಕ್ಕೆಲುಬಿನ ಭಾಗಕ್ಕೆ ಬಲವಾಗಿ ಹೊಡೆತ ಬಿದ್ದಿತ್ತು. ನೋವಿನಿಂದ ನೆಲಕ್ಕುರುಳಿದ ಶ್ರೇಯಸ್ ಅಯ್ಯರ್ ರನ್ನು ಬಳಿಕ ಫಿಸಿಯೋ ಬಂದು ಹೊರಗೆ ಕರೆದೊಯ್ದಿದ್ದರು.
ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೀಗ ಅವರ ಗಾಯದ ಆಳವೆಷ್ಟೆಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಶ್ರೇಯಸ್ ಗೆ ಪಕ್ಕೆಲುಬಿಗೆ ಬಲವಾದ ಪೆಟ್ಟು ಬಿದ್ದು ಆಂತರಿಕ ರಕ್ತಸ್ರಾವವಾಗಿದೆ. ಹೀಗಾಗಿ ಸದ್ಯಕ್ಕೆ ಅವರಿಗೆ ಸಿಡ್ನಿಯ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ರಕ್ತಸ್ರಾವದಿಂದ ದೇಹಕ್ಕೆ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಹೀಗಾಗಿ ಇನ್ನೂ ಒಂದು ವಾರ ಕಾಲ ಅವರನ್ನು ಆಸ್ಪತ್ರೆಯಲ್ಲಿರಿಸಿ ತೀವ್ರ ನಿಗಾ ವಹಿಸಲಾಗುತ್ತದೆ ಎಂದು ತಿಳಿದುಬಂದಿದೆ. ಸದ್ಯಕ್ಕಂತೂ ಅವರು ಮತ್ತೆ ಕ್ರಿಕೆಟ್ ಆಡುವ ಪರಿಸ್ಥಿತಿಯಲ್ಲಿಲ್ಲ.