ಪಾಕಿಸ್ತಾನದ ಅರ್ಷದ್ ನದೀಮ್ ಆಹ್ವಾನಿಸಿದ್ದ ನೀರಜ್ ಚೋಪ್ರಾರನ್ನು ದೇಶದ್ರೋಹಿ ಎಂದು ಕರೆದ ಜನ

Krishnaveni K

ಶುಕ್ರವಾರ, 25 ಏಪ್ರಿಲ್ 2025 (12:48 IST)
ನವದೆಹಲಿ: ಭಾರತದ ಖ್ಯಾತ ಜ್ಯಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಪಾಕಿಸ್ತಾನದ ಜ್ಯಾವೆಲಿನ್ ಥ್ರೋ ಪಟು ಅರ್ಷದ್ ನದೀಮ್ ರನ್ನು ಆಹ್ವಾನಿಸಿದ್ದಕ್ಕೆ ಈಗ ಅವರಿಗೆ ದೇಶದ್ರೋಹಿ ಎಂದು ಜರೆಯಲಾಗುತ್ತಿದೆ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ.

ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ. ಇದರ ನಡುವೆಯೇ ನೀರಜ್ ಎನ್ ಸಿ ಕ್ಲಾಸಿಕ್ ಟೂರ್ನಿಗೆ ಪಾಕಿಸ್ತಾನದ ಜ್ಯಾವೆಲಿನ್ ಥ್ರೋ ಪಟು ಅರ್ಷದ್ ನದೀಮ್ ಗೆ ಆಹ್ವಾನವಿತ್ತಿದ್ದರು. ಅರ್ಷದ್ ಜೊತೆಗೆ ನೀರಜ್ ಚೋಪ್ರಾ ಉತ್ತಮ ಬಾಂಧವ್ಯವಿಟ್ಟುಕೊಂಡಿದ್ದಾರೆ.

ಆದರೆ ಇದೀಗ ಪಹಲ್ಗಾಮ್ ದಾಳಿಯ ಹಿನ್ನಲೆಯಲ್ಲಿ ಪಾಕಿಸ್ತಾನದ ಕ್ರೀಡಾಳುವನ್ನು ಆಹ್ವಾನಿಸಿರುವುದಕ್ಕೆ ನೀರಜ್ ಚೋಪ್ರಾರನ್ನು ದೇಶದ್ರೋಹಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ. ಇದೆಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಅವರು ಈಗ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಅರ್ಷದ್ ರನ್ನು ನಾನು ಆಹ್ವಾನಿಸಿದ ಕಾರಣಕ್ಕೆ ದೇಶದ್ರೋಹಿಯಾಗಿದ್ದೇನೆ. ಆದರೆ ಅರ್ಷದ್ ರನ್ನು ಆಹ್ವಾನಿಸಿದ್ದು ಪಹಲ್ಗಾಮ್ ದಾಳಿಗೆ ಮುನ್ನ. ಆದರೆ ಈಗ ನನಗೆ ದೇಶಕ್ಕಿಂತ ಮುಖ್ಯ ಯಾವುದೂ ಇಲ್ಲ. ಹಾಗಿದ್ದರೂ ನನ್ನನ್ನು ಮತ್ತು ನನ್ನ ಕುಟುಂಬದರವನ್ನು ದೇಶದ್ರೋಹಿ ಎಂದು ಟಾರ್ಗೆಟ್ ಮಾಡಲಾಗುತ್ತಿದೆ. ಇದು ನನಗೆ ಬೇಸರ ತಂದಿದೆ. ನಾನು ಹೆಚ್ಚಾಗಿ ಮೌನವಾಗಿರುವ ವ್ಯಕ್ತಿ. ಹಾಗಂತ ನನಗೆ ದೇಶದ ಬಗ್ಗೆ ಅಭಿಮಾನವಿಲ್ಲ ಎಂದಲ್ಲ. ಈಗ ಪಹಲ್ಗಾಮ್ ದಾಳಿಯ ಬಳಿಕ ಅರ್ಷದ್ ಟೂರ್ನಿಯ ಭಾಗವಾಗುವ ಪ್ರಶ್ನೆಯೇ ಬರುವುದಿಲ್ಲ. ನಾನು ಇಷ್ಟು ವರ್ಷಗಳಿಂದ ದೇಶಕ್ಕೆ ಹೆಮ್ಮೆಯಿಂದ ಸೇವೆ ಸಲ್ಲಿಸಿದ್ದೇನೆ.  ಇಂದು ನನ್ನ ದೇಶಭಕ್ತಿಯನ್ನು ಪ್ರಶ್ನಿಸಲಾಗುತ್ತಿದೆ. ಇದು ನನಗೆ ನೋವು ತಂದಿದೆ ಎಂದು ಸುದೀರ್ಘ ಸಂದೇಶ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ