ಐದು ದಿನದಲ್ಲಿ ಒಂದು ಲಕ್ಷ ಜನರಿಂದ ಹರಕೆಮುಡಿ ಅರ್ಪಣೆ

ವಿಜೃಂಭಣೆಯ ಬ್ರಹ್ಮೋತ್ಸವದ ಮೊದಲ ಐದು ದಿನಗಳಲ್ಲಿ ದಾಖಲೆ ಸಂಖ್ಯೆಯ ಭಕ್ತರು ತಿರುಮಲ ಸನ್ನಿಧಿಗೆ ಮುಡಿ ಒಪ್ಪಿಸಿದ್ದಾರೆ.

ಸೆ.15ರಂದು ಆರಂಭವಾದ ಒಂಬತ್ತು ದಿನಗಳ ಉತ್ಸವದಲ್ಲಿ ಬುಧವಾರದವರೆಗೆ ಸುಮಾರು ಒಂದು ಲಕ್ಷದಷ್ಟು ಮಂದಿ ಕೇಶ ಮುಂಡನ ಮಾಡಿಸಿದ್ದಾರೆ ಎಂದು ಟಿಟಿಡಿ ಕಲ್ಯಾಣಕಟ್ಟೆಯ ಉಪ ಕಾರ್ಯನಿರ್ವಹಣಾಧಿಕಾರಿ ವೆಂಕಟಯ್ಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣಕಟ್ಟೆಯಲ್ಲಿ ಯಾತ್ರಾರ್ಥಿಗಳು ಕಾಯುವ ಸಮಯವನ್ನು ತಗ್ಗಿಸುವ ನಿಟ್ಟಿನಲ್ಲಿ, ಈಗಿರುವ 735 ಸಿಬ್ಬಂದಿಗಳ ಸಂಖ್ಯೆಗೆ ಹೊಸದಾಗಿ 40 ಮಹಿಳೆಯರೂ ಸೇರಿದಂತೆ 110 ಕ್ಷೌರಿಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ನಿರ್ಣಯದ ಪ್ರಕಾರ, ಕಲ್ಯಾಣಕಟ್ಟೆಯಲ್ಲಿ ಭಕ್ತರಿಗೆ ಶ್ರೀಗಂಧದ ಬಿಲ್ಲೆಗಳನ್ನು ಉಚಿತವಾಗಿಯೇ ವಿತರಿಸಲಾಗುತ್ತಿದೆ. ತಂಪು ಅನುಭವ ನೀಡುವ ಚಂದನದ ಬಿಲ್ಲೆಗಳನ್ನು ನೀರಿನಲ್ಲಿ ಬೆರೆಸಿ, ಕೇಶಮುಂಡನದ ಬಳಿಕ ಹಚ್ಚಿಕೊಳ್ಳಲಾಗುತ್ತದೆ.

ವಾರ್ಷಿಕವಾಗಿ ಇಲ್ಲಿ ಸುಮಾರು 10 ಲಕ್ಷದಷ್ಟು ಯಾತ್ರಾರ್ಥಿಗಳು ಮುಂಡನ ಮಾಡಿಸಿಕೊಳ್ಳುತ್ತಾರೆ.

ವೆಬ್ದುನಿಯಾವನ್ನು ಓದಿ