ನರಕಾಸುರ ವಧೆ

ರಜನಿ

ಆಸ್ವಿನ್ಯಾಸ್ಯಾಂಸಿತೇ ಪಕ್ಷೇ
ಚತುರ್ದಶ್ಯಾಂ ವಿದೂದಯೇ
ಸ್ನಾಪಯೇತ್ ತಿಲತೈಲೇನ
ರೌರವಂ ನರಕಂ ಪ್ರಜೇತ್

ಆಶ್ವೀಜ ಮಾಸದ,ಕೃಷ್ಣ ಪಕ್ಷ ಚತುರ್ದಶಿಯಂದು ನಾವೆಲ್ಲರೂ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡಬೇಕು. ಹಾಗೆ ಮಾಡದಿದ್ದಲ್ಲಿ ನಮಗೆ ರೌರವ ನರಕ ಪ್ರಾಪ್ತಿಯಾಗುತ್ತದೆ. (ರೌರವ ನರಕ ಎಂದರೆ ಮುಳ್ಳಿನ ಮರ ಮತ್ತು ಹುಲ್ಲಿನಿಂದ ಕೂಡಿದ ಕಾಡು.ಇಲ್ಲಿ ಯಮಕಿಂಕರರು ನಮ್ಮನ್ನು ಆಕಡೆಯಿಂದ ಈ ಕಡೆಗೆ ಓಡಿಸುತ್ತಾರೆ.) ಈ ನರಕವನ್ನು ತಪ್ಪಿಸುವ ಸಲುವಾಗಿ ನಾವು ಚತುರ್ದಶಿ ದಿವಸ ಎಣ್ಣೆಹಚ್ಚಿ ಸ್ನಾನಮಾಡಬೇಕು. ಇದರ ಪೌರಾಣಿಕ ಹಿನ್ನೆಲೆಯು ಹೀಗಿದೆ:

ಹಿಂದೆ ಅಸುರರು, ಸುರರು ಎಂಬುದಾಗಿ ಇದ್ದರು. ಅಸುರರು ರಾಕ್ಷಸ ಸ್ವಭಾವದವರಾದರೆ ಸುರರು ದೈವಿಕ ಶಕ್ತಿಯುಳ್ಳವರಾಗಿದ್ದರು. ಇಂತಹ ರಜೋತ್ತಮಗುಣ ಪ್ರಧಾನವಾದ ರಾಕ್ಷಸರಲ್ಲಿ ನರಕಾಸುರನೂ ಒಬ್ಬನು.

ನರಕಾಸುರನು ಭೂದೇವಿಯ ಮಗನಾಗಿದ್ದನು. ಈತ ಶೋಣಿತಾಪುರದ ಅರಸು(ಕೆಲವರ ಪ್ರಕಾರ ಪ್ರಾಗ್ಜ್ಯೋತಿಶಪುರ). ಈಶ್ವರನನ್ನು ತಪಸ್ಸು ಮಾಡಿ ತನಗೆ ಸ್ತ್ರೀಯರಿಂದ ಮಾತ್ರವೇ ಮರಣ ಸಿಗಬೇಕು ಎಂಬುದಾಗಿ ವರಪಡೆದಿದ್ದನು.

ರಾಕ್ಷಸರ ಮುಖ್ಯ ಸ್ವಭಾವವೆಂದರೆ ಅವರು ಅಹಿತವನ್ನು ಬಯಸುವವರು. ನರಕಾಸುರನು ಋಷಿಗಳ ತಪಸ್ಸಿಗೆ ತಪೋಭಂಗ ಮಾಡುತ್ತಿದ್ದನು. ಯಜ್ಞಯಾಗಾದಿಗಳಿಗೆ ಅಡ್ಡಿಮಾಡುತ್ತಿದ್ದನು. ಋಷಿಪತ್ನಿಯರನ್ನು ಹಿಂಸಿಸುತ್ತಿದ್ದನು. ಅಲ್ಲದೆ ಲೋಕಕಂಟಕನಾಗಿ ದೇವಾದಿದೇವತೆಗಳಿಗೆ ಉಪದ್ರವ ನೀಡುತ್ತಿದ್ದನು.

ಉದ್ಧಟತನದಿಂದ ಮೆರೆಯುತ್ತಿದ್ದ ನರಕಾಸುರನನ್ನು ಕೊಲ್ಲಲೇಬೇಕೆಂಬ ಪರಿಸ್ಥಿತಿ ಅನಿವಾರ್ಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ದೇವತೆಗಳು ಋಷಿಮುನಿಗಳು ನರಕಾಸುರನ ಸಂಹಾರ ಮಾಡಬೇಕೆಂದು ಕೃಷ್ಣನಲ್ಲಿ ವಿನಂತಿಸಿಕೊಂಡರು. ಇವರ ಪ್ರಾರ್ಥನೆಗೆ ಮನಸೋತ ಶ್ರೀಕೃಷ್ಣನು ನರಕಾಸುರನನ್ನು ಸಂಹಾರ ಮಾಡಲು ನಿರ್ಧರಿಸಿದನು.

ಆದರೆ ತನಗೆ ಸ್ತ್ರೀಯರಿಂದಲೇ ಮರಣ ಎಂಬ ವರಪಡೆದಿದ್ದ ಕಾರಣ ಆತನನ್ನು ಕೊಲ್ಲುವುದು ಕೃಷ್ಣನಿಗೆ ಸುಲಭವಾಗಿರಲಿಲ್ಲ. ಅದಕ್ಕಾಗಿ ಶ್ರೀಕೃಷ್ಣನು ಒಂದು ಉಪಾಯವನ್ನು ಮಾಡಿದನು. ತನ್ನ ಪತ್ನಿಯಾದ ಸತ್ಯಭಾಮೆಯ ಮುಖಾಂತರ ಆಶ್ವಯುಜ ಮಾಸದ ಕೃಷ್ಣಪಕ್ಷದಂದು ಅವನನ್ನು ಸಂಹರಿಸಿದನು.

ನರಕದಂತಾಗಿದ್ದ ಲೋಕವು ಅವನ ಸಂಹಾರದಿಂದ ಪುಣ್ಯಪಾವನವಾಯಿತು. ಯಜ್ಞಯಾಗಾದಿಗಳು ಯಾವುದೇ ಅಡ್ಡಿಯಿಲ್ಲದೆ ಸರಾಗವಾಗಿ ನಡೆಯತೊಡಗಿದವು. ತಪಸ್ಸುಗಳು ಉತ್ತಮ ರೀತಿಯಲ್ಲಿ ಸಾಗಿದವು.

ಇನ್ನೊಂದು ಹಿನ್ನೆಲೆಯ ಪ್ರಕಾರ, ನರಕಾಸುರನು 16,000 ಗೋಪಿಕಾ ಸ್ತ್ರೀಯರನ್ನು ಬಂಧನದಲ್ಲಿಟ್ಟಿದ್ದನು ಮತ್ತು ಅವರಿಗೆ ಅತೀವ ಕಿರುಕುಳವನ್ನು ನೀಡುತ್ತಿದ್ದನು. ಅಂತಹ ಪರಿಸ್ಥಿತಿಯಲ್ಲಿ ಗೋಪಿಕಾ ಸ್ತ್ರೀಯರೆಲ್ಲ ಶ್ರೀಕೃಷ್ಣನ ಮೊರೆ ಹೊಕ್ಕರು. ಶ್ರೀಕೃಷ್ಣನು ಗೋಪಿಕಾ ಸ್ತ್ರೀಯರಿಗಾಗಿ ಸತ್ಯಭಾಮೆಯ ಮುಖಾಂತರ ನರಕಾಸುರನ ವಧೆ ಮಾಡಿದನು.

ನರಕಾಸುರನ ವಧೆಯ ನಂತರ ಬಂಧನದಲ್ಲಿದ್ದ ಗೋಪಿಕಾ ಸ್ತ್ರೀಯರೆಲ್ಲ ಅತೀವ ಸಂತೋಷದಿಂದ ತೈಲಾಭ್ಯಂಜನವನ್ನು ಮಾಡಿ ಸ್ನಾನಗೈದು ಪವಿತ್ರಪಾವನರಾದರು.

ವೆಬ್ದುನಿಯಾವನ್ನು ಓದಿ