ಸಿಡಿಲಬ್ಬರ ಬ್ಯಾಟಿಂಗ್‌ ಬಳಿಕ ಕಷ್ಟದ ಕ್ಷಣಗಳನ್ನು ನೆನೆದು ಭಾವುಕರಾದ ಸಂಜು ಸ್ಯಾಮ್ಸನ್

Sampriya

ಭಾನುವಾರ, 13 ಅಕ್ಟೋಬರ್ 2024 (14:18 IST)
Photo Courtesy X
ಹೈದರಾಬಾದ್‌: ಸಂಜು ಸ್ಯಾಮ್ಸನ್‌ ಅವರ ಸಿಡಿಲಬ್ಬರ ಬ್ಯಾಟಿಂಗ್‌ ಬಲದಿಂದ ಭಾರತ ತಂಡವು ಹೈದರಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರವಾಸಿ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಸರಣಿಯನ್ನು ಕ್ಲೀನ್​ ಸ್ವೀಪ್​ ಮಾಡಿತು.

ಪಂದ್ಯದ ಹೀರೋ ಕೇರಳದ ಸಂಜು ಸ್ಯಾಮ್ಸನ್ ಕೇವಲ 47 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್​ಗಳ ನೆರವಿನಿಂದ 111 ರನ್​ ಗಳಿಸಿದರು. ಇದು ಅವರ ಮೊದಲ ಟಿ20 ಶತಕವಾಗಿದೆ. ಅಲ್ಲದೆ, ಟಿ20 ಮಾದರಿಯಲ್ಲಿ ರೋಹಿತ್‌ ಶರ್ಮಾ ಬಳಿಕ ಭಾರತೀಯ ಆಟಗಾರನ ಎರಡನೇ ಅತಿವೇಗದ ಶತಕವಾಗಿದೆ.

ಸರಣಿ ಸೋಲುಗಳಿಂದ ಕಂಗೆಟ್ಟಿದ್ದ ಸಂಜು ಈಗ ಭರ್ಜರಿಯಾಗಿ ಕಂಬ್ಯಾಕ್​ ಮಾಡಿದ್ದಾರೆ. ಸಂಜು ಅವರ ಬ್ಯಾಟಿಂಗ್​ ಅಬ್ಬರದ ಕಾರಣ ಭಾರತವು 6 ವಿಕೆಟ್​ ನಷ್ಟಕ್ಕೆ 297 ರನ್ ಗಳಿಸಿತು. ಇದು ಟಿ20 ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ಸ್ಕೋರ್ ಎನಿಸಿಕೊಂಡಿದೆ.​

ಈ ಹಿಂದೆ ಸಂಜು ಅವರ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಟಿ20 ವಿಶ್ವಕಪ್​ ಸಂದರ್ಭದಲ್ಲಿ ತಂಡಕ್ಕೆ ಆಯ್ಕೆಯಾದರೂ ಕಣಕ್ಕೆ ಇಳಿದಿರಲಿಲ್ಲ. ಇದಾದ ಬಳಿಕ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಎರಡು ಬಾರಿ ಗೋಲ್ಡನ್​ ಡಕ್​ ಆಗಿದ್ದರು. ಹೀಗೆ ಹಲವು ಬಾರಿ ಕೊಟ್ಟ ಅವಕಾಶವನ್ನು ಸಂಜು ಕೈಚೆಲ್ಲಿದ್ದರು.

ಬಾಂಗ್ಲಾ ವಿರುದ್ಧ ಮೊದಲ ಎರಡು ಪಂದ್ಯಗಳಲ್ಲಿ ಹೆಚ್ಚು ಪ್ರಭಾವ ಬೀರದ ಸಂಜು, 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿ ಬೊಬ್ಬರಿದರು. ಈ ಮೂಲಕ ತನ್ನ ಬಗ್ಗೆ ಈವರೆಗೆ ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದರು.  

ಪಂದ್ಯದ ಬಳಿಕ ಮಾತನಾಡಿದ ಸಂಜು ತುಂಬಾ ಭಾವುಕರಾದರು. ನಾನು ಚೆನ್ನಾಗಿ ಆಡಿದ್ದಕ್ಕೆ ತಂಡದ ಸಹ ಆಟಗಾರರು ಖುಷಿಯಾಗಿದ್ದನ್ನು ಕಂಡು ನನಗೆ ತುಂಬಾ ಸಂತೋಷವಾಗಿದೆ. ಹಲವಾರು ಆಟಗಳನ್ನು ಆಡುವ ಮೂಲಕ ಒತ್ತಡ ಮತ್ತು ನನ್ನ ವೈಫಲ್ಯಗಳನ್ನು ಹೇಗೆ ಎದುರಿಸಬೇಕೆಂದು ನನಗೆ ಚೆನ್ನಾಗಿ ತಿಳಿದಿದೆ. ಏಕೆಂದರೆ, ನಾನು ಬಹಳಷ್ಟು ಬಾರಿ ಸೋತಿದ್ದೇನೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ