ಬೆಂಗಳೂರು: ಐಪಿಎಲ್ 2025 ರ ಫೈನಲ್ ನಲ್ಲಿ ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ಆರ್ ಸಿಬಿ ಆಡಲಿದ್ದು ಒಂದು ವೇಳೆ ಫೈನಲ್ ಪಂದ್ಯ ಗೆದ್ದ ಬಳಿಕ ಅಭಿಮಾನಿಗಳೇನಾದರೂ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನೆಪದಲ್ಲಿ ಬೇಡದ ಕೆಲಸಕ್ಕೆ ಕೈ ಹಾಕಿದಿರೋ ನಿಮಗೆ ಕಾದಿದೆ ಶಿಕ್ಷೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್ ಎಚ್ಚರಿಕೆ ರವಾನಿಸಿದ್ದಾರೆ.
ಆರ್ ಸಿಬಿ ಪ್ರತೀ ಪಂದ್ಯ ಗೆದ್ದಾಗಲೂ ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವವರ ಸಂಖ್ಯೆಗೇನೂ ಕಡಿಮೆಯಿರಲಿಲ್ಲ. ಮೊನ್ನೆ ಫೈನಲ್ ಗೇರುತ್ತಿದ್ದಂತೆಯೂ ಬೀದಿಗಳಿದು ಅಭಿಮಾನಿಗಳು ಸಂಭ್ರಮಿಸಿದ್ದರು.
ಹೀಗಿರುವಾಗ ಎಲ್ಲಾದರೂ ಇಂದು ಕಪ್ ಗೆದ್ದರೆ ಕೇಳಬೇಕೇ? ಅಭಿಮಾನಿಗಳ ಸಂಭ್ರಮ ಮೇರೆ ಮೀರುವುದು ಪಕ್ಕಾ. ಹಾಗಂತ ಸಂಭ್ರಮಾಚರಣೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದು, ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವುದು ಮಾಡಿದರೆ ತಕ್ಕ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡದೇ ಸಾರ್ವಜನಿಕ ಸ್ಥಳದಲ್ಲಿ ಸ್ಕ್ರೀನ್ ಅಳವಡಿಸುವುದು, ರಸ್ತೆಯಲ್ಲಿ ಸಂಭ್ರಮಾಚರಿಸಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.