ಬಾರ್ಬಡೋಸ್ ನಲ್ಲಿ ಸಿಲುಕಿದ ಪತ್ರಕರ್ತರ ರಕ್ಷಣೆಗೆ ಬಂದ ಜಯ್ ಶಾ

Krishnaveni K

ಬುಧವಾರ, 3 ಜುಲೈ 2024 (16:06 IST)
ಬಾರ್ಬಡೋಸ್: ಟಿ20 ವಿಶ್ವಕಪ್ 2024 ರ ವರದಿ ಮಾಡಲು ವೆಸ್ಟ್ ಇಂಡೀಸ್ ಗೆ ತೆರಳಿದ್ದ ಭಾರತೀಯ ಪತ್ರಕರ್ತರ ಗುಂಪು ಕೂಡಾ ಬೆರಿಲ್ ಚಂಡಮಾರುತದಿಂದಾಗಿ ತವರಿಗೆ ಮರಳಲಾಗದೇ ಸಂಕಷ್ಟಕ್ಕೆ ಸಿಲುಕಿತು. ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ನೆರವಾಗಿದ್ದಾರೆ.

ಟಿ20 ವಿಶ್ವಕಪ್ ಗೆದ್ದ ಮರುದಿನವೇ ಟೀಂ ಇಂಡಿಯಾ ಕ್ರಿಕೆಟಿಗರು ಭಾರತಕ್ಕೆ ಮರಳಬೇಕಾಗಿತ್ತು. ಆದರೆ ಚಂಡಮಾರುತದಿಂದಾಗಿ ಹೋಟೆಲ್ ಕೊಠಡಿಯಲ್ಲೇ ಉಳಿಯಬೇಕಾಗಿ ಬಂದಿತು. ಇದೀಗ ಪರಿಸ್ಥಿತಿ ಸುಧಾರಿಸಿದ್ದು ಆಟಗಾರರು ಸ್ವದೇಶಕ್ಕೆ ಮರಳಲು ಏರ್ ಇಂಡಿಯಾ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ.

ಕ್ರಿಕೆಟಿಗರ ಜೊತೆ ಬಾರ್ಬಡೋಸ್ ನಲ್ಲಿ ಭಾರತದ ಕ್ರೀಡಾ ಪತ್ರಕರ್ತರೂ ಸಿಲುಕಿಕೊಂಡಿದ್ದರು. ಅವರೂ ಭಾರತಕ್ಕೆ ಮರಳಲು ತೊಂದರೆಯಾಗಿತ್ತು. ಇದೀಗ ಅವರಿಗೂ ಸುರಕ್ಷಿತವಾಗಿ ಮರಳಲು ಸ್ವತಃ ಜಯ್ ಶಾ ವ್ಯವಸ್ಥೆ ಮಾಡಿದ್ದಾರೆ. ಕ್ರಿಕೆಟಿಗರ ಜೊತೆ ಪತ್ರಕರ್ತರಿಗೂ ಪ್ರಯಾಣಿಸಲು ವಿಮಾನದಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಟಿ20 ವಿಶ್ವಕಪ್ ಗೆಲುವಿನ ಬಳಿಕ ಭಾರತದ ಕ್ರೀಡಾ ಪತ್ರಕರ್ತರು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜೊತೆ ಫೋಟೋ ಸೆಷನ್ ನಡೆಸಿದ್ದರು. ಭಾರತ ತಂಡಕ್ಕೆ ಬೆಂಬಲಿಸಲು ಮತ್ತು ಪ್ರಚಾರ ಮಾಡಲು ಬಂದಿದ್ದ ಪತ್ರಕರ್ತರಿಗೆ ಈಗ ಜಯ್ ಶಾ ನೆರವಾಗಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ