ವಿಶ್ವಕಪ್ ಗೆದ್ದ ಬಳಿಕ ಭಾರತಕ್ಕೆ ಮರಳಲು ಸಾಧ್ಯವಾಗದೇ ಟೀಂ ಇಂಡಿಯಾ ಕ್ರಿಕೆಟಿಗ ಒದ್ದಾಟ

Krishnaveni K

ಸೋಮವಾರ, 1 ಜುಲೈ 2024 (11:15 IST)
ಬಾರ್ಬಡೋಸ್: ಟಿ20 ವಿಶ್ವಕಪ್ 2024 ರಲ್ಲಿ ಚಾಂಪಿಯನ್ ಆಗಿರುವ ಟೀಂ ಇಂಡಿಯಾ ಆಟಗಾರರು ಯಾವಾಗ ತವರಿಗೆ ಮರಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಅತ್ತ ಕ್ರಿಕೆಟಿಗರು ತವರಿಗೆ ಮರಳಲಾಗದೇ ಒದ್ದಾಡುತ್ತಿದ್ದಾರೆ.

ಇದಕ್ಕೆ ಕಾರಣವೂ ಇದೆ. ಸದ್ಯಕ್ಕೆ ಬಾರ್ಬಡೋಸ್ ನಲ್ಲಿರುವ ಕ್ರಿಕೆಟಿಗರು ನಿನ್ನೆಯೇ ಭಾರತಕ್ಕೆ ಪ್ರಯಾಣ ಮಾಡಬೇಕಿತ್ತು. ಆದರೆ ಸದ್ಯಕ್ಕೆ ವೆಸ್ಟ್ ಇಂಡೀಸ್ ನಲ್ಲಿ ಪ್ರತಿಕೂಲ ಹವಾಮಾನವಿದೆ. ಮಳೆ, ಮೋಡ ಕವಿದ ವಾತಾವರಣದಿಂದಾಗಿ ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗಿದೆ.

ಜೊತೆಗೆ ಬಿರುಗಾಳಿ ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಬಹುತೇಕ ವಿಮಾನಗಳು ರದ್ದಾಗಿವೆ. ಇದರಿಂದಾಗಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ತವರಿಗೆ ಮರಳಲು ಸಾಧ್ಯವಾಗಿಲ್ಲ. ಟೀಂ ಇಂಡಿಯಾ ಆಟಗಾರರು ಇಲ್ಲಿನ ಹಿಲ್ಟನ್ ಹೋಟೆಲ್ ನಲ್ಲಿ ತಂಗಿದ್ದಾರೆ. ಸದ್ಯಕ್ಕೆ ಬಾರ್ಬಡೋಸ್ ನಲ್ಲಿ ಕರ್ಫ್ಯೂ ವಾತಾವರಣವಿದೆ.

ಆಟಗಾರರು ಮಾತ್ರವಲ್ಲ, ವೆಸ್ಟ್ ಇಂಡೀಸ್ ಗೆ ತೆರಳಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಅನೇಕರು ಅಲ್ಲಿಯೇ ಬಾಕಿಯಾಗಿದ್ದಾರೆ. ವಿಶ್ವಕಪ್ ಗೆಲುವಿನ ಬಳಿಕ ತವರಿಗೆ ಮರಳಲು ಹಾತೊರೆಯುತ್ತಿರುವ ಕ್ರಿಕೆಟಿಗರಿಗೆ ಈಗ ಹವಾಮಾನ ಶಾಪವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ