ಲಂಡನ್: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಭ್ ಪಂತ್ ಶತಕ ಗಳಿಸಿದ ಬಳಿಕ ಸೋಮರ್ ಸಾಲ್ಟ್ ಜಿಗಿತ ಮಾಡಿ ಸೆಲೆಬ್ರೇಷನ್ ಮಾಡುವುದನ್ನು ಶುರು ಮಾಡಿದ್ದಾರೆ. ಆದರೆ ಈ ಜಿಗಿತದಿಂದ ಅವರಿಗೆ ಅಪಾಯವಿದೆಯೇ? ಈ ಬಗ್ಗೆ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಶಾಕಿಂಗ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಳೆದ ಐಪಿಎಲ್ ನಿಂದ ರಿಷಭ್ ಶತಕ ಹೊಡೆದಾಗ ಸೋಮರ್ ಸಾಲ್ಟ್ ಜಿಗಿತ ಮಾಡುವ ಮೂಲಕ ಸೆಲೆಬ್ರೇಷನ್ ಮಾಡುವುದನ್ನು ಶುರು ಮಾಡಿದ್ದಾರೆ. ಇದರಿಂದ ಅವರು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನೇನೋ ಒದಗಿಸುತ್ತಿದ್ದಾರೆ. ಆದರೆ ಇದು ಅವರಿಗೆ ಎಷ್ಟು ಅಪಾಯಕಾರಿ ಗೊತ್ತಾ?
ಎಲ್ಲರಿಗೂ ಗೊತ್ತಿರುವ ಹಾಗೆ ಎರಡು ವರ್ಷದ ಮೊದಲಷ್ಟೇ ರಿಷಭ್ ಅಪಘಾತಕ್ಕೀಡಾಗಿ ಬದುಕಿ ಬಂದಿದ್ದೇ ಪವಾಡ. ಎದ್ದು ಓಡಾಡಲೂ ಆಗದ ಸ್ಥಿತಿಯಲ್ಲಿದ್ದ ಅವರು ಬಳಿಕ ಆರೇ ತಿಂಗಳಲ್ಲಿ ರಿಕವರಿಯಾಗಿ ಎಲ್ಲರನ್ನೂ ಅಚ್ಚರಿಗೊಳಪಡಿಸಿದ್ದರು.
ಈ ಬಗ್ಗೆ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯ ಡಾ ದಿನ್ಶಾ ಪರ್ದಿವಾಲಾ ಪ್ರತಿಕ್ರಿಯಿಸಿದ್ದಾರೆ. ರಿಷಭ್ ನೋಡಲು ಕೊಂಚ ದಪ್ಪಗಿದ್ದರೂ ಅವರದ್ದು ಜಿಮ್ನಾಸ್ಟಿಕ್ ಬಾಡಿ. ಅವರು ಜಿಮ್ನಾಸ್ಟಿಕ್ ಅಭ್ಯಾಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಸೋಮರ್ ಸಾಲ್ಟ್ ಜಿಗಿತದಲ್ಲಿ ಪರಿಣತಿಯಿದೆ. ಆದರೆ ಈ ರೀತಿಯ ಸೆಲೆಬ್ರೇಷನ್ ರಿಸ್ಕಿ ಮತ್ತು ಅನಗತ್ಯ ಎಂದು ಅವರು ಹೇಳಿದ್ದಾರೆ.
ಈ ಹಿಂದೊಮ್ಮೆ ಕನ್ನಡದ ನಟ ದೂದ್ ಪೇಡ ದಿಗಂತ್ ಸೋಮರ್ ಸಾಲ್ಟ್ ಜಿಗಿತ ಮಾಡಲು ಹೋಗಿ ಗಂಭೀರ ಗಾಯ ಮಾಡಿಕೊಂಡಿದ್ದು ನೆನಪಿರಬಹುದು. ಇಂತಹ ಜಿಗಿತದಲ್ಲಿ ಕೊಂಚವೇ ಆಯತಪ್ಪಿದರೂ ಗಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ರಿಷಭ್ ಗೆ ಇಂತಹ ರಿಸ್ಕ್ ಬೇಕಾ ಎಂಬ ಪ್ರಶ್ನೆ ಕೇಳಿಬಂದಿದೆ.