ಮನಶಾಸ್ತ್ರ ಕೆಲವು ಗುಟ್ಟುಗಳನ್ನು ತಿಳಿಸುತ್ತೆ ನಿಮಗೆ ಗೊತ್ತೇ...!

ಸೋಮವಾರ, 8 ಅಕ್ಟೋಬರ್ 2018 (15:48 IST)
ದಿನನಿತ್ಯದ ಜೀವನದಲ್ಲಿ ಏನಾದರೂ ಒಂದು ಘಟನೆಗಳು ಸಂಭವಿಸುತ್ತಿರುತ್ತದೆ ಅದು ಸಹಜ ಕೂಡಾ, ಆದರೆ ಅದು ಮಾನವನ ಬದುಕಿನ ಚಿಂತನೆಗಳನ್ನೇ ಬದಲಾಯಿಸುವ ಸಾಮರ್ಥವನ್ನು ಹೊಂದಿರಬಹುದು. ಅಂತಹ ಕೆಲವು ಸಂಗತಿಗಳನ್ನು ಅರಿಯುವ ಸಲುವಾಗಿಯೇ ಮನಶಾಸ್ತ್ರದಲ್ಲಿ ಮೊದಲೇ ಕೆಲವೊಂದು ಸಂಗತಿಗಳ ಕುರಿತು ವಿವರಿಸಲಾಗಿದೆ.

ಇದರ ಮೂಲಕ ವ್ಯಕ್ತಿಗಳ ನಡವಳಿಕೆ, ಅವರ ಅಂತರಾಳದ ಭಾವನೆಗಳನ್ನು ನಾವು ಕಂಡುಕೊಳ್ಳಬಹುದಾಗಿದೆ. ಅಂತಹ ಸಂಗತಿಗಳನ್ನು ನಾವು ಗಮನಿಸಿದಾಗ ಅದು ನಮ್ಮ ಸುತ್ತಮುತ್ತ ಇರುವ ವ್ಯಕ್ತಿ ಇಲ್ಲವೇ ನಮ್ಮ ಜೀವನದಲ್ಲಿ ನಾವು ಅನುಭವಿಸಿದ ಕ್ಷಣಗಳು ಅಥವಾ ಈ ತರಹದ ವ್ಯಕ್ತಿತ್ವವನ್ನು ನಾವು ಕೂಡಾ ಹೊಂದಿರಬಹುದು. ಹಾಗಿದ್ದರೆ ಅವು ಯಾವುವು ಅನ್ನೋ ಕೂತುಹಲ ನಿಮ್ಮಲ್ಲಿದ್ದರೆ ಈ ವರದಿ ಓದಿ.
 
*ಕೋಪ
ಯಾರಾದರೂ ಸಣ್ಣಪುಟ್ಟ ವಿಷಯಗಳಿಗೆ ಸಿಡುಕುತ್ತಿದ್ದರೆ ಅವರು ಹೆಚ್ಚು ಪ್ರೀತಿಯನ್ನು ಬಯಸುವ ವ್ಯಕ್ತಿಯಾಗಿರುತ್ತಾರೆ ಮತ್ತು ಅವರಿಗೆ ಹೆಚ್ಚಿನ ಪ್ರೀತಿಯ ಅಗತ್ಯವಿರುತ್ತದೆ ಎಂದು ಮನಶಾಸ್ತ್ರ ಹೇಳುತ್ತದೆ. ಅಂತಹವರು ಕೋಪದಲ್ಲಿರುವಾಗ ಅವರನ್ನು ಪ್ರೀತಿಯಿಂದ ಸಂತೈಸಿದರೆ ಅಂತಹವರು ಬೇಗ ಕರಗುತ್ತಾರೆ ಮತ್ತು ಅವರಿಂದ ಕೋಪದಲ್ಲಾಗುವ ಹಾನಿಯನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತದೆ.
 
*ಪದೇ ಪದೇ ಅಳುತ್ತಿದ್ದರೆ
ಯಾರಾದರೂ ಪದೇ ಪದೇ ಚಿಕ್ಕ ಚಿಕ್ಕ ವಿಷಯಗಳಿಗೆ ಅಳುತ್ತಿದ್ದರೆ ಅವರು ಮೃದು ಹೃದಯದವರು ಮುಗ್ಧರು ಎಂದು ಹೇಳಲಾಗುತ್ತದೆ ಅದು ವಾಸ್ತವಿಕವಾಗಿ ನಿಜವಾದರೂ ಕೆಲವರು ವಂಚಿಸಲು ಅಳುವುದುಂಟು ಯಾವುದಕ್ಕೂ ಎಚ್ಚರವಾಗಿರಬೇಕು.
 
*ಜಾಸ್ತಿ ನಿದ್ದೆ
ನೀವು ಜಾಸ್ತಿ ನಿದ್ದೆ ಮಾಡುತ್ತಿರಬಹುದು ಅಥವಾ ನಿಮ್ಮ ಸುತ್ತಮುತ್ತಲೂ ಜಾಸ್ತಿ ನಿದ್ದೆ ಮಾಡಿರುವವರನ್ನು ನೀವು ನೋಡಿರಬಹುದು ಅಂತಹವರು ಹೆಚ್ಚು ಅಂತರ್ಮುಖಿಗಳಾಗಿರುತ್ತಾರೆ ಮತ್ತು ಹೆಚ್ಚು ದುಃಖಿಗಳಾಗಿರುತ್ತಾರೆ ಎನ್ನುತ್ತೆ ಮನಶಾಸ್ತ್ರ. ಅಲ್ಲದೇ ಇವರು ಹೆಚ್ಚು ಕನಸನ್ನು ಕಾಣುವವರು ಮತ್ತು ಹೆಚ್ಚು ಇಚ್ಛಾ ಶಕ್ತಿಯನ್ನು ಹೊಂದಿರುವವರು ಆಗಿರುತ್ತಾರೆ ಮತ್ತು ಇವರು ಹೆಚ್ಚು ಆಲಸಿಗಳಾಗಿದ್ದರೂ ಸಹ ಹಿಡಿದ ಕೆಲಸವನ್ನು ಪೂರ್ತಿ ಮಾಡುವವರೆಗೂ ಅದರ ಕುರಿತಾಗಿಯೇ ಚಿಂತಿಸುತ್ತಾರೆ ಎನ್ನಲಾಗಿದೆ.
 
*ಜಾಸ್ತಿ ತಿಂಡಿಬಾಕರು
ನಾವು ಕೆಲವರನ್ನು ನೋಡುತ್ತಿರುತ್ತೇವೆ ಅವರು ಹೆಚ್ಚು ತಿನ್ನುತ್ತಿರುತ್ತಾರೆ ಅವರು ಹೆಚ್ಚು ಉದ್ವಿಗ್ನ ಮನೋಭಾವವನ್ನು ಹೊಂದಿರುತ್ತಾರೆ. ಇವರು ಬಹಳ ಬೇಗ ಕೋಪಗೊಳ್ಳುವ ಮನಸ್ಥಿತಿಯನ್ನು ಹೊಂದಿರಬಹುದು ಎನ್ನುತ್ತೆ ಮನಶಾಸ್ತ್ರ.
 
*ಕಣ್ಣೀರು ಯಾಕೆ ಬರುತ್ತದೆ
ನಮಗೆ ಗೊತ್ತಿಲ್ಲದೇ ನಮ್ಮ ಭಾವನೆಗಳನ್ನು ಹೊರ ಹಾಕುವ ಸಾಧನ ಎಂದರೆ ಕಣ್ಣೀರು ಅಂತಾನೇ ಹೇಳಬಹುದು, ಅಲ್ಲದೇ ಹೆಚ್ಚಾಗಿ ನಮ್ಮವರು ನಮ್ಮಿಂದ ದೂರಾದಾಗ ಈ ಕಣ್ಣೀರು ಬರುವುದನ್ನು ನಾವು ನೋಡುತ್ತೇವೆ ಅಷ್ಟಕ್ಕೂ ಈ ಕಣ್ಣೀರು ಬರಲು ಒಂದು ಕಾರಣವಿದೆ. ನಮ್ಮ ಭಾವನೆಗಳ ಮೇಲೆ ನಮ್ಮ ನಗು, ಅಳು ನಿರ್ಧಾರವಾಗುತ್ತದೆ. ನಾವು ಪ್ರೀತಿಸಿದ ವ್ಯಕ್ತಿಯನ್ನು ಕಳೆದುಕೊಂಡಾಗ ನಮಗೆ ಕಣ್ಣೀರು ಬರುವುದಿಲ್ಲ ಆದರೆ ನಮ್ಮ ಮನಸ್ಸಿನಲ್ಲಿ ನಾವು ಅವರನ್ನು ಕಳೆದುಕೊಳ್ಳಬಾರದು ಎಂದು ಅಂದುಕೊಂಡಾಗ ಕಣ್ಣೀರು ಬರುತ್ತದೆ ಹಾಗಾಗಿಯೇ ಕಣ್ಣೀರು ನಾವು ಕೋಪದಲ್ಲಿರುವಾಗಲೂ ಸಹ ಬರಬಹುದು ಅದಕ್ಕೆ ಕಳೆದುಕೊಳ್ಳಬಾರದು ಎಂಬ ಮನಸ್ಥಿತಿಯೇ ಕಾರಣವಾಗಿರುತ್ತದೆ.
 
*ನೋವು
ಪ್ರತಿಯೊಬ್ಬ ವ್ಯಕ್ತಿಯು ನೋವು ಪಟ್ಟಿರುವವರೇ ಆಗಿರುತ್ತಾರೆ ಅವರನ್ನೆಲ್ಲಾ ಒಮ್ಮೆ ಕೇಳಿ ನೋಡಿದಾಗ ನಿಮಗನಿಸಿರಬಹುದು ದೇಹಕ್ಕೆ ಆದ ನೋವಿಗಿಂತ ಮನಸಿಗೆ ಆದ ನೋವು ತುಂಬಾ ಕಾಡುತ್ತದೆ ಎಂದು, ಇದು ನಿಜಕ್ಕೂ ಹೌದು ಎನ್ನುತ್ತೆ ಮನಶಾಸ್ತ್ರ. ನಮ್ಮ ಮೆದುಳು ಎಷ್ಟು ಸೂಕ್ಷ್ಮವಾಗಿರುತ್ತದೆ ಎಂದರೆ ದೇಹಕ್ಕೆ ಆದ ನೋವು ಗಾಯವನ್ನು ಬೇಗನೇ ಮರೆತುಬಿಡುತ್ತದೆ ಆದರೆ ಮನಸಿಗೆ ನಾಟಿರುವ ನೋವನ್ನು ಮರೆಯಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ, ಕೆಲವೊಮ್ಮೆ ಅದು ಸಾಧ್ಯವಾಗದೇ ಇರಬಹುದು. ಹಾಗಾಗಿ ಯಾವುದಕ್ಕೂ ಇನ್ನೊಬ್ಬರ ಮನಸ್ಸನ್ನು ನೋಯಿಸುವ ಮೊದಲು ಎಚ್ಚರಿಕೆಯಿಂದಿರಿ.
 
 
*ಪ್ರೇಮ ಪಾಶಕ್ಕೆ ಸಿಲುಕುವವರು
ನಮ್ಮ ಸುತ್ತಮುತ್ತಲೂ ಹೆಚ್ಚು ಭಾವುಕರಾಗಿರುವ ವ್ಯಕ್ತಿಗಳನ್ನು ನೀವು ನೋಡಿರುತ್ತೀರಿ ಮನಶಾಸ್ತ್ರದ ಪ್ರಕಾರ ಇವರು ಪ್ರೀತಿ ಪ್ರೇಮದಲ್ಲಿ ಬೇಗನೆ ಬೀಳುತ್ತಾರಂತೆ ಮತ್ತು ಇವರು ಕನಿಷ್ಟ 4 ನಿಮಿಷಗಳಲ್ಲಿ ಪ್ರೀತಿಯಲ್ಲಿ ಬೀಳಬಲ್ಲರೂ ಎಂದು ಹೇಳಲಾಗುತ್ತದೆ ಬಹುಶಃ ಇವರಿಂದಲೇ ಇರಬೇಕು ಮೊದಲ ನೋಟದಲ್ಲೇ ಪ್ರೀತಿ ಶುರುವಾಗುತ್ತೆ ಎನ್ನೋ ಮಾತು ಪ್ರಚಲಿತದಲ್ಲಿರೋದು.
 
*ನಗು
ನಾವು ಸಾಕಷ್ಟು ಕಾಮಿಡಿಯನ್‌ಗಳನ್ನು ಇಲ್ಲವೇ ಜೋಕರ್‌ಗಳನ್ನು ನೋಡಿರುತ್ತೇವೆ ಇಲ್ಲವೇ ನಮ್ಮೊಟ್ಟಿಗೆ ನಮ್ಮ ಸುತ್ತಮುತ್ತಲೂ ಹೆಚ್ಚು ಮುಗುಳುನಗುತ್ತಾ ಇರುವ ವ್ಯಕ್ತಿಗಳನ್ನು ನೋಡಿರುತ್ತೇವೆ. ಅವರು ಹೆಚ್ಚು ಕಾಲ ನಗುತ್ತಾ ನಗಿಸುತ್ತಾ ಇರುತ್ತಾರೆ, ಹಾಗಂದ ಮಾತ್ರಕ್ಕೆ ಅವರು ಹೆಚ್ಚು ಸಂತೋಷದಿಂದ ಇರುತ್ತಾರೆ ಎಂದು ಅರ್ಥವಲ್ಲ. ನಿಜ ಹೇಳಬೇಕೆಂದರೆ ಅವರು ಹೆಚ್ಚು ದುರಂತಗಳನ್ನು ಅನುಭವಿಸಿರುತ್ತಾರೆ ಮತ್ತು ಹೆಚ್ಚು ದುಃಖಿಗಳಾಗಿರುತ್ತಾರೆ ಎನ್ನುತ್ತೆ ಮನಶಾಸ್ತ್ರ.
 
*ಹೆಚ್ಚು ಸಂಗೀತವನ್ನು ಆಲಿಸುವವರು
ನಮ್ಮಲ್ಲಿ ಎಲ್ಲಿ ನೋಡಿದರೂ ಬಹಳಷ್ಟು ಜನರು ಹೆಡ್‌ಫೋನ್ ಅನ್ನು ಕಿವಿಗೆ ಸಿಕ್ಕಿಸಿ ಹಾಡನ್ನು ಕೇಳುತ್ತಾ ಗುಣುಗುತ್ತಾ ಇರುವುದನ್ನು ನಾವು ನೋಡಿರ್ತೇವೆ. ಅವರು ಹೆಚ್ಚು ಸಂಗೀತ ಪ್ರೀಯರಾಗಿಬೇಕು ಅಂತಾ ನಾವು ಅಂದುಕೊಂಡಿರುತ್ತೇವೆ ಆದರೆ ವಿಷಯಾನೇ ಬೇರೆ ಅದೇನಪ್ಪಾ ಅಂದ್ರೆ ಬಹಳಷ್ಟು ಜನರು ತನ್ನ ಆಂತರ್ಯದ ಭಾವನೆಗಳನ್ನು ಇತರರಿಗೆ ತಿಳಿಯದಿರಲಿ ಎನ್ನುವ ಕಾರಣಕ್ಕೆ ಹೆಚ್ಚು ಹಾಡನ್ನು ಕೇಳುತ್ತಾರೆ, ಇವರು ತಮ್ಮ ಮನಸ್ಸಿನ ಗುಟ್ಟನ್ನು ಇತರರಿಗೆ ತಿಳಿಯಪಡಿಸಲು ಇಷ್ಟಪಡದಿರುವ ವ್ಯಕ್ತಿಗಳಾಗಿರುತ್ತಾರೆ.
 
*ಏಕಾಂಗಿತನ
ನಮ್ಮ ಸುತ್ತ ಕೆಲವು ವ್ಯಕ್ತಿಗಳಿರುತ್ತಾರೆ ಅವರು ಎಲ್ಲರೊಡನೆ ಬೆರೆಯುವುದಿಲ್ಲ ತುಂಬಾ ನೋಡಲು ಸಾಮಾನ್ಯವಾಗಿಯೇ ಇರುತ್ತರಾದರೂ ಎಲ್ಲರೊಡನೆ ಬೆರೆತು ಇರುವುದು ಇವರಿಂದ ಸಾಧ್ಯವಿರುವುದಿಲ್ಲ ಇವರು ಹೆಚ್ಚು ಒಂಟಿಯಾಗಿರಲು ಬಯಸುತ್ತಾರೆ. ಇವರಿಗೆ ವಿಶೇಷವಾದ ಆಸಕ್ತಿಗಳಿರುತ್ತವೆ ಉದಾ, ಓದುವುದು, ಚಿತ್ರಕಲೆ, ಬರೆಯುವುದು, ಒಬ್ಬನೇ ಅಲೆಮಾರಿಯ ಹಾಗೇ ಅಲೆಯುವುದು. ಇವರು ನಮಗೆ ಸ್ವಲ್ಪ ಅಹಂಕಾರಿಗಳಂತೆ ಕಂಡರು ಇವರು ತುಂಬಾ ಹೃದಯಶಾಲಿಗಳಾಗಿರುತ್ತಾರೆ ಮತ್ತು ಇವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗೆಳೆಯರಿರುವುದಿಲ್ಲ ಹಾಗಾಗಿಯೇ ಇವರು ತಮ್ಮನ್ನು ತಾವು ಹೆಚ್ಚು ವಿಮರ್ಶೆಗೆ ಗುರಿಮಾಡಿಕೊಳ್ಳುತ್ತಾರೆ ಇವರು ತುಂಬಾ ಚತುರರಾಗಿರುತ್ತಾರೆ ಮತ್ತು ಹೆಚ್ಚು ಯಶಸ್ಸು ಹೊಂದಿರುವವರ ಪಟ್ಟಿಯಲ್ಲಿ ಇವರ ಹೆಸರು ಇರುತ್ತದೆ. ಇವರು ವ್ಯಕ್ತಿಯನ್ನು ಆಯ್ಕೆಮಾಡಿಕೊಳ್ಳುವಾಗ ತುಂಬಾ ಹುಷಾರಾಗಿರುತ್ತಾರೆ.
 
ಇದಷ್ಟೇ ಅಲ್ಲದೇ ಇನ್ನೂ ಕೆಲವು ಭಾವನೆಗಳು ಸನ್ನೆಗಳು ಮತ್ತು ಮುಖಚರ್ಯದಿಂದಲೂ ನಮ್ಮ ಒಳ ಅಂತರಾಳವನ್ನು ಅಳೆಯಬಹುದಾಗಿದೆ. ಅದರಲ್ಲಿ ಮುಖ್ಯವಾಗಿ ಹೇಳುವುದಾದರೆ ಮಾತನಾಡುವಾಗ ಕೈ ಹಿಸುಕಿಕೊಳ್ಳುವುದು ಇಲ್ಲವೇ ಬೆವರುವುದು ಮುಂತಾದವು ನಮ್ಮ ಒಳಮನಸ್ಸಿನ ಉದ್ವೇಗವನ್ನು ತೋರಿಸುತ್ತದೆ. ಅಲ್ಲದೇ ಕೈ ಕುಲುಕುವಾಗ ಹಿಡಿತ ಬಿಗಿಯಾಗಿಲ್ಲದಿಲ್ಲರೆ ಅದು ನಮ್ಮ ಆತ್ಮವಿಶ್ವಾಸದ ಮಟ್ಟದಲ್ಲಿನ ಕೊರತೆಯನ್ನು ತೋರಿಸುತ್ತದೆ. ಅಲ್ಲದೇ ನಗುವಾಗ ಬಾಯಿಗೆ ಬಟ್ಟೆ ಇಟ್ಟುಕೊಳ್ಳುವುದು, ಕೈ ಇಟ್ಟುಕೊಳ್ಳುವುದು ನಮ್ಮ ಒಳಗೆ ಸಾಕಷ್ಟು ಗುಟ್ಟುಗಳಿವೆ ಎಂಬುದನ್ನು ತೋರಿಸುತ್ತದೆ.

ಅಲ್ಲದೇ ಮುಖವನ್ನು ಮನಸ್ಸಿನ ಕನ್ನಡಿ ಎಂದು ಹೇಳಲಾಗುತ್ತದೆ ನಾವು ಎಷ್ಟೇ ಗುಟ್ಟುಗಳನ್ನು ಇಟ್ಟುಕೊಂಡರು ನಮ್ಮ ಕಣ್ಣುಗಳು ಸುಲಭವಾಗಿ ಇನ್ನೊಬ್ಬರಿಗೆ ಅಂದರ ಸಾರವನ್ನು ತಿಳಿಸಿಕೊಡುತ್ತದೆ. ಹಾಗಾಗಿ ಕೆಲವರು ಸುಳ್ಳನ್ನು ಹೇಳುವಾಗ ಕಣ್ಣಲ್ಲಿ ಕಣ್ಣಿಟ್ಟು ಹೇಳದಿರುವುದು. ಒಟ್ಟಿನಲ್ಲಿ ಅವರವರ ಭಾವನೆ ಮತ್ತು ಅವರ ವ್ಯಕ್ತಿತ್ವದಿಂದ ನಾವು ಸುಲಭವಾಗಿ ಅವರನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಇದು ಸಹಾಯಕಾರಿಯಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ