ವಿವಾದಿತ ಹೇಳಿಕೆ ನೀಡಿ ವಿವಾದ ಬೆಳೆಸಬೇಡಿ ಎಂದು ಕ್ಷಮೆ ಯಾಚಿಸಿದ ಹಂಸಲೇಖ

Krishnaveni K

ಶನಿವಾರ, 20 ಜುಲೈ 2024 (10:33 IST)
ಬೆಂಗಳೂರು: ಜೈನರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ಈಗ ಸಮುದಾಯದಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೇ ಕ್ಷಮೆ ಕೇಳಿದ್ದು, ವಿವಾದ ಬೆಳೆಸಬೇಡಿ ಎಂದು ಮನವಿ ಮಾಡಿದ್ದಾರೆ.

ಇತ್ತೀಚೆಗೆ ಹಂಸಲೇಖ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಕೆಲವು ಸಮಯದ ಹಿಂದೆ ಪೇಜಾವರ ಶ್ರೀಗಳಿಗೆ ಮಾಂಸ ಕೊಟ್ಟರೆ ತಿನ್ತಾರಾ ಎಂದು ಲೇವಡಿ ಮಾಡಿ ಬ್ರಾಹ್ಮಣ ಸಮುದಾಯದವರ ಆಕ್ರೋಶಕ್ಕೆ ಗುರಿಯಾಗಿದ್ದರು. ವಿವಾದದ ಬಳಿಕ ಅವರು ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಬೇಕಾಯಿತು.

ಇದಾದ ಬಳಿಕ ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾ ಹಿಂದೆ ಹೋದರೆ ಗಡ್ಡ ಬೆಳೆಯುತ್ತದೆ ಅಷ್ಟೇ ಎಂದು ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಇದರಿಂದ ಹಂಸಲೇಖ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು. ನೀವೂ ಬೇರೆ ಭಾಷೆಗಳಿಂದ ಟ್ಯೂನ್ ಇಲ್ಲಿಗೆ ತಂದಿಲ್ಲವೇ ಎಂದು ಪ್ರಶ್ನೆ ಮಾಡಿದ್ದರು.

ಇದೀಗ ಜೈನ ಸಮುದಾಯದ ನಂಬಿಕೆ ಬಗ್ಗೆ ಲೇವಡಿ ಮಾಡಲು ಹೋಗಿ ವಿವಾದಕ್ಕೆ ಸಿಲುಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಜೈನ ಫಿಲಾಸಫಿಯಲ್ಲಿ 24 ಜನ್ಮಗಳು ಇವೆಯಂತೆ. ಅದೆಲ್ಲ ಸುಳ್ಳು, ಬುಲ್ ಶಿಟ್ ಎಂದು ಹಂಸಲೇಖ ಹೇಳಿದ್ದರು. ಅವರ ಈ ಹೇಳಿಕೆಗೆ ಜೈನ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ.

ಜೈನ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಹಂಸಲೇಖ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹ ಕೇಳಿಬಂದಿತ್ತು. ಇದರ ಬೆನ್ನಲ್ಲೇ ವಿಡಿಯೋ ಮೂಲಕ ಕ್ಷಮೆ ಯಾಚಿಸಿದ ಹಂಸಲೇಖ, ಅದು ಬಾಯ್ತಪ್ಪಿನಿಂದ ಬಂದ ಮಾತು. ಇದನ್ನು ಇನ್ನಷ್ಟು ಬೆಳೆಸಬೇಡಿ. ನನ್ನ ಮಾತಿಗೆ ಕ್ಷಮೆ ಯಾಚಿಸುವೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ