ನನಗೆ ಯಾವುದೇ ಖಾತೆ ಕೊಟ್ಟರು ಸಂತೋಷ - ಬಸವರಾಜ ಹೊರಟಿ

ಶನಿವಾರ, 2 ಜುಲೈ 2022 (16:36 IST)
ಎಮ್ ಎಲ್ ಸಿ ಆಗಿ ಯಾವ ಅಧಿಕಾರವನ್ನು ಕೇಳುವುದಿಲ್ಲ, ನನ್ನ ಮೇಲೆ ನಂಬಿಕೆಯಿಟ್ಟು ಯಾವುದೇ ಹುದ್ದೆ ನೀಡಿದರೂ ಸಮರ್ಥವಾಗಿ ನಿಭಾಯಿಸುವೆ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
 
ನಗರದ ಪತ್ರಕರ್ತರ ಭವದಲ್ಲಿಂದು ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಯಾವುದೇ ಹುದ್ದೆಯನ್ನು ನೀಡಿದರೂ ನಾನು ಬೇಡಾ ಎನ್ನವುದಿಲ್ಲ.
ನನ್ನ ಆತ್ಮದ ವಿರುದ್ಧ ಎಂದಿಗೂ ನಾ ನಡೆಯೋದಿಲ್ಲ. ಈ ಹಿಂದಿನಂತೆಯೇ ನೇರ ನುಡಿಯಲ್ಲಿಯೇ ಮಾತನಾಡುವೆ ಎಂದರು.
 
ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹಿಂದೆ ಉಳಿದಿದೆ. ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲು ಯಾರಿಂದಲೂ ಸಾಧ್ಯವಿಲ್ಲ. ದೇವರು ಕೆಳಗೆ ಬಂದರೂ ಅದು ಆಗದು. ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗಿರುತ್ತೆ ಎಂದು ಅಸಮಾಧಾನಗೊಂಡರು.
 
ಮಕ್ಕಳ ಕಲಿಕಾ ಮಟ್ಟ ಸುಧಾರಿಸಲು ಸರ್ಕಾರ ಎಲ್ಲ‌ ರೀತಿಯ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳ ವಿಷಯದಲ್ಲಿ ಯಾರು ಕಮರ್ಷಿಯಲ್ ಆಗಬಾರದು. ಇದೀಗ ಪಠ್ಯಪುಸ್ತಕ, ಸಮವಸ್ತ್ರ ಸರಿಯಾಗಿ ಮಕ್ಕಳಿಗೆ ತಲುಪುತ್ತಿಲ್ಲ. ಅದನ್ನು ಸರ್ಕಾರ ಮತ್ತು ಅಧಿಕಾರಿಗಳು ಕಾಲಕಾಲಕ್ಕೆ ತಲುಪಿಸುವ ಕೆಲಸ ಮಾಡಬೇಕು. ನನ್ನ ಅಧಿಕಾರದ ಅವಧಿಯಲ್ಲಿ ಮೇ ತಿಂಗಳಲ್ಲಿಯೇ ಸೈಕಲ್, ಪುಸ್ತಕ ಕೊಡುವ ಪದ್ದತಿ ಇತ್ತು. ಆದರೆ ಕೆಲವೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ದೊಡ್ಡ ಮಟ್ಟದ ಸಮಸ್ಯೆಗೆ ಕಾರಣವಾಗುತ್ತದೆ‌. ಹಾಗಾಗಿ ಶಾಲೆ ಪ್ರಾರಂಭದಲ್ಲೇ ಎಲ್ಲ ಸೌಲಭ್ಯ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ