ಪೊಲೀಸರ ಮುಂದೆ ದರ್ಶನ್ ಆಂಡ್ ಗ್ಯಾಂಗ್ ನೀಡಿದ ತಪ್ಪೊಪ್ಪಿಗೆ ವಿವರ ಇಲ್ಲಿದೆ

Krishnaveni K

ಶುಕ್ರವಾರ, 14 ಜೂನ್ 2024 (10:47 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಗ್ಯಾಂಗ್ ಪೊಲೀಸರ ಮುಂದೆ ನೀಡಿದ ತಪ್ಪೊಪ್ಪಿಗೆ ಹೇಳಿಕೆ ವಿವರ ಲಭ್ಯವಾಗಿದೆ. ದರ್ಶನ್, ಪವಿತ್ರಾ ಗೌಡ, ರಾಘವೇಂದ್ರ ಸೇರಿದಂತೆ ಪ್ರಮುಖ ಆರೋಪಿಗಳು ತಮ್ಮ ಹೇಳಿಕೆ ನೀಡಿದ್ದಾರೆ.

ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ‘ನನಗೆ ಬಂದ ಎಲ್ಲಾ ಅಶ್ಲೀಲ ಸಂದೇಶಗಳನ್ನು ನನ್ನ ಆಪ್ತ ಪವನ್ ಗೆ ಕಳುಹಿಸಿದ್ದೆ. ಅದನ್ನು ಯಾವುದೇ ಕಾರಣಕ್ಕೂ ದರ್ಶನ್ ಗೆ ತೋರಿಸಬೇಡ ಎಂದಿದ್ದೆ. ಆದರೆ ಪವನ್ ಇದನ್ನು ದರ್ಶನ್ ಗೆ ಹೇಳಿದ್ದ. ಇದರಿಂದಲೇ ಅನಾಹುತವಾಯ್ತು. ಕೊಲೆ ಮಾಡ್ತಾರೆ ಎನ್ನುವ ಕಲ್ಪನೆಯೂ ನನಗಿರಲಿಲ್ಲ. ರೇಣುಕಾಸ್ವಾಮಿ ಬಂದಾಗ ನಾನು ಅಲ್ಲಿಗೆ ಹೋಗಿ ಆತನಿಗೆ ಚಪ್ಪಲಿ ಏಟು ಕೊಟ್ಟು ವಾಪಸ್ ಬಂದಿದ್ದೆ. ಆಮೇಲೇನಾಯ್ತು ಎಂದು ನನಗೆ ಗೊತ್ತಿಲ್ಲ’ ಎಂದಿದ್ದಾರೆ.

ಇನ್ನು ಎ2 ಆರೋಪಿಯಾಗಿರುವ ನಟ ದರ್ಶನ್ ‘ನಾನು ಶೆಡ್ ಗೆ ಹೋಗಿದ್ದು ನಿಜ. ರೇಣುಕಾಸ್ವಾಮಿಗೆ ಎರಡು ಬಾರಿಸಿದ್ದೆ. ಇನ್ಮುಂದೆ ಈ ರೀತಿ ಮಾಡಿದರೆ ಸರಿ ಇರಲ್ಲ ಎಂದು ಎಚ್ಚರಿಕೆ ಕೊಟ್ಟೆ. ಬಳಿಕ ಅವನಿಗೆ ಹಣ ಕೊಟ್ಟು ಊಟ ಮಾಡಿಕೊಂಡು ಊರಿಗೆ ಮರಳುವಂತೆ ಹೇಳಿ ಅಲ್ಲಿಂದ ತೆರಳಿದ್ದೆ. ಆಮೇಲೆ ಏನಾಯ್ತು ನನಗೆ ಗೊತ್ತಿಲ್ಲ’ ಎಂದಿದ್ದಾರೆ.

ಇನ್ನು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದಿದ್ದ ಆರೋಪಿ ರಾಘವೇಂದ್ರ ‘ಅಣ್ಣ ಫೋನ್ ಮಾಡಿ ರೇಣುಕಾಸ್ವಾಮಿಯನ್ನು ಕರೆತರಲು ಹೇಳಿದ್ದರು. ಅದರಂತೆ ಆತನನ್ನು ಪತ್ತೆ ಮಾಡಿ ಎರಡು ದಿನ ಆತನ ಚಲನವಲನವನ್ನು ಗಮನಿಸಿದ್ದೆ. ಬಳಿಕ ಆತನನ್ನು ಚಿತ್ರದುರ್ಗದಿಂದ ಕಾರಿನಲ್ಲಿ ಕರೆತಂದು ಅಣ್ಣನ ಮುಂದೆ ನಿಲ್ಲಿಸಿದ್ದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ