ಕರ್ನಾಟಕವು ಅಪರಾಧಿಗಳ ರಾಜ್ಯವಾಗುತ್ತಿದೆ: ಶೋಭಾ ಕರಂದ್ಲಾಜೆ ಆಕ್ಷೇಪ

Krishnaveni K

ಸೋಮವಾರ, 5 ಮೇ 2025 (20:14 IST)
ಬೆಂಗಳೂರು: ಕರ್ನಾಟಕವು ಅಪರಾಧಿ ರಾಜ್ಯವಾಗುತ್ತಿದೆ ಎಂದು ಬೆಂಗಳೂರು ಉತ್ತರ ಸಂಸದೆ ಮ್ತತು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಆಕ್ಷೇಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಹಿಂದೆ, ಬಿಹಾರದಲ್ಲಿ ಪ್ರತಿನಿತ್ಯ ಅಪರಾಧ ನಡೆಯುತ್ತಿದೆ ಎಂದು ದಕ್ಷಿಣದಲ್ಲಿ ನಾವು ಕುಳಿತು ಮಾತನಾಡುತ್ತಿದ್ದೆವು. ಈಗ ಬಿಹಾರದಲ್ಲಿ ಶಾಂತಿ ನೆಲೆಸಿದೆ. ಕರ್ನಾಟಕದಲ್ಲಿ ಪ್ರತಿನಿತ್ಯ ಒಂದು- ಎರಡು, ಮೂರು ನಾಲ್ಕು ಎಂಬ ರೀತಿಯಲ್ಲಿ ಕೊಲೆ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.
 
ಕರ್ನಾಟಕದಲ್ಲಿ ರಾಜ್ಯ ಸರಕಾರ ಬದುಕಿದೆಯೇ ಅಥವಾ ಸತ್ತಿದೆಯೇ ಎಂಬ ಸಂಶಯ ಕೇವಲ ನಮ್ಮ ರಾಜ್ಯದ ಜನರಿಗೆ ಅಲ್ಲ; ನಾವು ಯಾವ ರಾಜ್ಯಕ್ಕೆ ಹೋದರೂ ಕೂಡ ‘ನಿಮ್ಮ ರಾಜ್ಯಕ್ಕೆ ಏನಾಗಿದೆ?’ ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಎಂದು ತಿಳಿಸಿದರು. ಸಿದ್ದರಾಮಯ್ಯನವರ ಸರಕಾರ ಯಾವಾಗ ಆಡಳಿತಕ್ಕೆ ಬರುತ್ತದೋ, ಕರ್ನಾಟಕ ರಾಜ್ಯದಲ್ಲಿ ಅಪರಾಧಿಗಳ ಕೈ ಮೇಲಾಗುತ್ತದೆ ಎಂದು ಟೀಕಿಸಿದರು.
 
2013ರಲ್ಲಿ ಸಿದ್ದರಾಮಯ್ಯನವರ ಸರಕಾರ ಆಡಳಿತ ಮಾಡಿತ್ತು. ಅವತ್ತು ಅಪರಾಧಿಗಳ ಕೈ ಮೇಲಾಗಿತ್ತು. ಅವತ್ತು ಇದ್ದ ಪಿಎಫ್‍ಐ, ಕೆಎಫ್‍ಡಿ- ಹೀಗೆ ಬೇರೆಬೇರೆ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಭಯೋತ್ಪಾದಕರನ್ನು, ಸಮಾಜಘಾತುಕರನ್ನು, ರುದ್ರೇಶ್ ಅವರ ಕೊಲೆ ಸೇರಿ ಬೇರೆಬೇರೆ ಕೇಸಿನಲ್ಲಿ ಬಂಧನಕ್ಕೆ ಒಳಗಾದವರ ಮೊಕದ್ದಮೆಗಳನ್ನು ಕ್ಯಾಬಿನೆಟ್ ಸಭೆಯಲ್ಲಿ ಹಿಂದಕ್ಕೆ ಪಡೆದಿದ್ದರು ಎಂದು ಆರೋಪಿಸಿದರು.
 
ಅಪರಾಧ ಮಾಡಲು ಕುಮ್ಮಕ್ಕು..
ಹುಬ್ಬಳ್ಳಿಯಲ್ಲಿ ಮೊನ್ನೆ ಪೊಲೀಸ್ ಠಾಣೆ ಸುಡುವ ಘಟನೆ ನಡೆಯಿತು. ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ನುಗ್ಗುವ ಕೆಲಸ ಮಾಡಿದರು. ಪೊಲೀಸರಿಗೆ ಹೊಡೆದರು. ಅಂಥ 43 ಕೇಸುಗಳನ್ನು ಮತ್ತೆ ಹಿಂಪಡೆಯುವ ಒಂದು ಪ್ರಸ್ತಾಪವನ್ನು ಸಂಪುಟ ಸಭೆಗೆ ಸಿದ್ದರಾಮಯ್ಯನವರು ತಂದರು. ರಾಜ್ಯದಲ್ಲಿರುವ ಸಮಾಜಘಾತುಕರನ್ನು, ಭಯೋತ್ಪಾದಕರನ್ನು ರಸ್ತೆಯಲ್ಲಿ ಬಿಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ. ಯಾರು ಜೈಲಿನಲ್ಲಿ ಇರಬೇಕೋ ಅವರನ್ನು ಬೀದಿಗೆ ಬಿಟ್ಟರು. ಅವರನ್ನು ರಾಜಾರೋಷವಾಗಿ ತಿರುಗಲು ಬಿಟ್ಟಿದ್ದಾರೆ; ಅಲ್ಲದೆ ಅವರು ಅಪರಾಧ ಮಾಡಲು ಕುಮ್ಮಕ್ಕು ನೀಡಿದ್ದಾರೆ ಎಂದು ಟೀಕಿಸಿದರು.

ಇದರ ಪರಿಣಾಮವಾಗಿ ಕಳೆದ ಅವರ ಸರಕಾರದಲ್ಲಿ 23 ಹಿಂದೂ ಯುವಕರನ್ನು, ಕಾರ್ಯಕರ್ತರನ್ನು ನಾವು ಕಳೆದುಕೊಂಡೆವು. ಎನ್‍ಐಎ, ಅಮಿತ್ ಶಾ ಅವರಿಗೆ ಪತ್ರ ಬರೆದ ಪರಿಣಾಮವಾಗಿ ರುದ್ರೇಶ್ ಕೇಸ್, ಪ್ರವೀಣ್ ನೆಟ್ಟಾರು ಅವರ ಕೇಸನ್ನು ತನಿಖೆ ಮಾಡಲಾಯಿತು. ಎನ್‍ಐಎ ತನಿಖೆ ಮೂಲಕ ರಾಜ್ಯದಲ್ಲಿ ಯಾರ್ಯಾರು ಬೇರೆಬೇರೆ ದೇಶಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದರೋ, ಬೇರೆಬೇರೆ ದೇಶಗಳಲ್ಲಿ ತರಬೇತಿ ಪಡೆದಿದ್ದರೋ, ಬೇರೆಬೇರೆ ರಾಜ್ಯÀಗಳಲ್ಲಿ ಕೊಲೆ ಮಾಡಿ ಅವಿತುಕೊಂಡಿದ್ದರೋ ಅವರು ಸಿಕ್ಕಿ ಹಾಕಿಕೊಂಡರು ಎಂದು ವಿವರಿಸಿದರು.

ಮಂಗಳೂರು, ಮೈಸೂರು, ಪುತ್ತೂರು, ಸುಳ್ಯ ಇಂಥ ಭಾಗಗಳಲ್ಲಿ ಯಾರು ಭಯೋತ್ಪಾದಕರು, ಸಮಾಜದ್ರೋಹಿ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿದ್ದರೋ, ಹಣಕಾಸಿನ ನೆರವು ನೀಡುತ್ತಿದ್ದವರು ಸಿಕ್ಕಿ ಹಾಕಿಕೊಂಡರು. ಅವರೀಗ ಜೈಲಿನಲ್ಲಿ ಇದ್ದಾರೆ. ಇದರ ಪರಿಣಾಮವಾಗಿ ಕೇಂದ್ರ ಸರಕಾರಕ್ಕೆ ಒಂದು ಬಲವಾದ ಆಧಾರ ಸಿಕ್ಕಿದೆ. ಪಿಎಫ್‍ಐ ನಿಷೇಧದ ಕೋರಿಕೆ ಮುಂದಿಟ್ಟಿದ್ದೆವು. ಸರಿಯಾದ ಸಬೂಬು, ಸಮರ್ಪಕ ಮಾಹಿತಿ, ಸರಿಯಾದ ಕೇಸುಗಳು ಕೇಂದ್ರ ಸರಕಾರಕ್ಕೆ ಸಿಕ್ಕಿರಲಿಲ್ಲ; ಪ್ರವೀಣ್ ನೆಟ್ಟಾರು ಕೇಸಿನಲ್ಲಿ ಪಿಎಫ್‍ಐ ಕೈವಾಡ ಗೊತ್ತಾಯಿತು. ಇದರ ಪರಿಣಾಮವಾಗಿ ಕೇಂದ್ರ ಸರಕಾರವು ಪಿಎಫ್‍ಐ ನಿಷೇಧಿಸಿದೆ ಎಂದು ತಿಳಿಸಿದರು.
 
ಪಿಎಫ್‍ಐ ಕಾರ್ಯಕರ್ತರು ಎಲ್ಲಿ ಹೋದರು? ಅವರು ಇನ್ನೂ ಕಾರ್ಯಾಚರಣೆಯಲ್ಲಿ ಇದ್ದಾರೆ. ಅವರೆಲ್ಲ ರಾಜಕೀಯ ಸಂಸ್ಥೆ ಎಸ್‍ಡಿಪಿಐ ಸೇರಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಕುಮ್ಮಕ್ಕಿನ ಕಾರಣಕ್ಕಾಗಿ, ಸಿದ್ದರಾಮಯ್ಯನವರು ಕೇಸನ್ನು ಹಿಂಪಡೆದ ಪರಿಣಾಮವಾಗಿ ಅಲ್ಲಿರುವ ಎಲ್ಲ ಅಪರಾಧಿಗಳು ಮತ್ತೆ ಕೊಲೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
 
ಸಹಿ ಹಾಕಿ ಅಭಿಯಾನಕ್ಕೆ ಚಾಲನೆ
ರಾಜ್ಯದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಕೂಡಲೇ ತೆರವು ಮಾಡುವಂತೆ ಆಗ್ರಹಿಸುವುದಾಗಿ ಪಾಕಿಸ್ತಾನದ ಪ್ರಜೆಗಳ ತೆರವು ಕುರಿತು ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸುವ ಮನವಿಪತ್ರಕ್ಕೆ ಸಹಿ ಹಾಕುವ ಮೂಲಕ ಅಭಿಯಾನವನ್ನು ಉದ್ಘಾಟಿಸಿದರು.

ಬಿಜೆಪಿ ರಾಜ್ಯ ಸರಕಾರ ಇರುವಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲೂ ಕೂಡ ಪ್ರತಿ ಜಿಲ್ಲೆಯಲ್ಲಿ ನೂರಾರು ಪಾಕಿಸ್ತಾನಿ ನಿವಾಸಿಗಳಿದ್ದಾರೆ ಎಂದು ಇದೇವೇಳೆ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ ಅವರು ವಿವರಿಸಿದರು.
 
 
                                                  
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ