ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ಆಗಸ್ಟ್ 5 ರಂದು ಬೆಂಗಳೂರಿನಲ್ಲಿ ಮತಗಳವು ವಿರುದ್ಧ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆ ಸಮಾವೇಶಕ್ಕಾಗಿ ಬೆಂಗಳೂರಿನಲ್ಲಿ ಮರಗಳಿಗೆ ಕತ್ತರಿ ಹಾಕಲಾಗುತ್ತಿದೆ. ಈ ಬಗ್ಗೆ ಬಿಜೆಪಿ ವಿಡಿಯೋ ಬಿಡುಗಡೆ ಮಾಡಿದೆ.
ಲೋಕಸಭೆ ಚುನಾವಣೆ ವೇಳೆ ಚುನಾವಣಾ ಆಯೋಗವೇ ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಕಳ್ಳಾಟ ನಡೆಸಿದೆ. ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ರಾಹುಲ್ ಗಾಂಧಿ ಪ್ರತಿಭಟನೆಗೆ ತೀರ್ಮಾನಿಸಿದ್ದಾರೆ. ಬೆಂಗಳೂರಿನ ಮಹದೇವಪುರ ವ್ಯಾಪ್ತಿಯಲ್ಲೂ ಮತಗಳ್ಳತನ ನಡೆದಿದೆ ಎಂಬುದು ಅವರ ಆರೋಪವಾಗಿದೆ.
ಹೀಗಾಗಿ ಬೆಂಗಳೂರಿನಲ್ಲೇ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರನ್ನು ಕರೆತರಲು ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಉಸ್ತುವಾರಿ ರಣದೀಪ್ ಸುರ್ಜೇವಾಲ ಸೂಚನೆ ನೀಡಿದ್ದಾರೆ.
ಇದೀಗ ಸಮಾವೇಶಕ್ಕಾಗಿ ಸಿದ್ಧತೆ ನಡೆಯುತ್ತಿದ್ದು ಇದಕ್ಕಾಗಿ ಫ್ರೀಡಂ ಪಾರ್ಕ್ ನ ಕಂಪೌಂಡ್ ಕಿತ್ತು ಹಾಕಿ ಜೆಸಿಬಿ ನುಗ್ಗಿಸಿ ಹಲವು ಮರಗಳಿಗೆ ಕತ್ತರಿ ಹಾಕಲಾಗಿದೆ. ಈ ವಿಡಿಯೋ ಹಂಚಿಕೊಂಡಿರುವ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಸೋಲಿನ ಹತಾಶೆಯಲ್ಲಿರುವ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ಮೇಲೆ ಸುಳ್ಳು ಆರೋಪ ಹೊರಿಸಿ ಪ್ರತಿಭಟನೆ ನೆಪದಲ್ಲಿ ಬೀದಿ ನಾಟಕವಾಡಲು ಸಿದ್ಧರಾಗುತ್ತಿದ್ದಾರೆ.
ಹೈಕಮಾಂಡ್ ಖುಷಿ ಪಡಿಸಲು ಪೈಪೋಟಿಗೆ ಬಿದ್ದಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಫ್ರೀಡಂ ಪಾರ್ಕ್ ಕಾಂಪೌಂಡ್ ಒಡೆದು ರಸ್ತೆ ನಿರ್ಮಾಣ ಮಾಡಿ, ಮರಗಳ ಮಾರಣಹೋಮ ಮಾಡಿದ್ದಕ್ಕೆ ಪರಿಸರವಾದಿಗಳು ಛೀಮಾರಿ ಹಾಕುತ್ತಿದ್ದಾರೆ. ಕಾಂಗ್ರೆಸ್ಸಿಗರೇ ನಿಮ್ಮ ನಾಟಕ ತುಂಬಾ ದಿನ ನಡೆಯುವುದಿಲ್ಲ, ಶೀಘ್ರವೇ ನಿಮ್ಮ ಬಣ್ಣ ಬಯಲಾಗಲಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.