ಶಿಲ್ಲಾಂಗ್: ಮೇಘಾಲಯ ಹನಿಮೂನ್ನಲ್ಲಿ ಪತಿಯನ್ನು ಪ್ರಿಯಕರ ಸಹಾಯದಿಂದ ಹತ್ಯೆ ಮಾಡಿದ ಪ್ರಕರಣ ಸಂಬಂಧ ಆರೋಪಿಗಳಿಗೆ ಇನ್ನೂ 14 ದಿನಗಳ ನ್ಯಾಯಾಂಗ ಬಂಧವನ್ನು ವಿಧಿಸಲಾಗಿದೆ.
ದೇಶವನ್ನೇ ಬೆಚ್ಚಿಬೀಳಿಸಿದ ಇಂಧೋರ್ನ ಉದ್ಯಮಿ ರಾಜಾ ರಘುವಂಶಿ ಹತ್ಯೆ ಸಂಬಂಧ ಆರೋಪಿಗಳಾದ ಆತನ ಪತ್ನಿ ಸೋನಂ ರಘುವಂಶಿ, ಆಕೆಯ ಪ್ರಿಯಕರ ರಾಜ್ ಕುಶ್ವಾಹಾ ಮತ್ತು ವಿಶಾಲ್ ಚೌಹಾಣ್ ಅವರಿಗೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ಡಿಕೆಕೆ ಮಿಹ್ಸಿಲ್ ನ್ಯಾಯಾಲಯವು ಆಗಸ್ಟ್ 1 ರಿಂದ ಇನ್ನೂ 14 ದಿನಗಳ ನ್ಯಾಯಾಂಗ ಬಂಧನವನ್ನು ನೀಡಿದೆ.
ಪ್ರಕರಣ ಸಂಬಂಧ ನಡೆದ ವಿಡಿಯೊ ಕಾನ್ಫರೆನ್ಸ್ ವಿಚಾರಣೆಯಲ್ಲಿ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ತುಷಾರ್ ಚಂದಾ ಅವರು 14ದಿನಗಳ ನ್ಯಾಯಾಂಗ ಬಂಧನವನ್ನು ತಿಳಿಸಿದ್ದಾರೆ.
ಜುಲೈ 31 ರಂದು, ಇತರ ಇಬ್ಬರು ಆರೋಪಿಗಳಾದ ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.
ಏನಿದು ಪ್ರಕರಣ: ಇದೇ ವರ್ಷದ ಜನವರಿಯಂದು ಮೇಘಾಲಯಕ್ಕೆ ಹನಿಮೂನ್ ಗೆ ತೆರಳಿದ್ದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರ ಹತ್ಯೆಯಾಗಿತ್ತು. ತನಿಖೆ ವೇಳೆ ಆತನ ಪತ್ನಿ ಸೋನಂ ಮತ್ತು ಆಕೆಯ ಪ್ರಿಯಕರನ ಗ್ಯಾಂಗ್ ರಾಜಾ ರಘುವಂಶಿಯನ್ನು ಹತ್ಯೆ ಮಾಡಿತ್ತು.ನಾಪತ್ತೆ ಪ್ರಕರಣದ ಬಳಿಕ ಪತ್ನಿ ಸೋನಂ ಪೊಲೀಸರಿಗೆ ಶರಣಾಗಿದ್ದಳು.