ಟೀಂ ಇಂಡಿಯಾದಿಂದ ಕಡೆಗಣನೆ: ರಣಜಿ ಟ್ರೋಫಿ ಫೈನಲ್ ನಲ್ಲಿ ಶ್ರೇಯಸ್ ಅಯ್ಯರ್ ಮಿಂಚಿಂಗ್

Krishnaveni K

ಮಂಗಳವಾರ, 12 ಮಾರ್ಚ್ 2024 (14:30 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾದಿಂದ ತಮ್ಮ ಸ್ವಯಂಕೃತ ಅಪರಾಧಗಳಿಂದಾಗಿ ಅವಗಣನೆಗೊಳಗಾಗಿದ್ದ ಶ್ರೇಯಸ್ ಅಯ್ಯರ್ ಈಗ ಮುಂಬೈ ಪರ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.

ಮುಂಬೈ ಮತ್ತು  ವಿದರ್ಭ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ ಶ್ರೇಯಸ್ ಕೇವಲ 7 ರನ್ ಗೆ ಔಟಾಗಿದ್ದರು. ಮುಂಬೈ 224 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ವಿದರ್ಭ 105 ರನ್ ಗಳಿಗೇ ಸರ್ವಪತನ ಕಂಡಿತ್ತು.

ಇದೀಗ ದ್ವಿತೀಯ ಇನಿಂಗ್ಸ್ ನಲ್ಲಿ ಮುಂಬೈ ಭರ್ಜರಿ ಬ್ಯಾಟಿಂಗ್ ನಡೆಸಿದೆ. ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ನಷ್ಟಕ್ಕೆ 341 ರನ್ ಗಳಿಸಿದೆ. ಈ ಮೂಲಕ 460 ರನ್ ಗಳ ಭಾರೀ ಮುನ್ನಡೆ ಗಳಿಸಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ಮುಂಬೈ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ 95 ರನ್ ಗಳಿಸಿ ಔಟಾಗಿದ್ದಾರೆ. ಮುಶೀರ್ ಖಾನ್ ಜೊತೆ ಮೂರನೇ ವಿಕೆಟ್ ಗೆ ಶತಕದ ಜೊತೆಯಾಟವಾಡಿದ ಶ್ರೇಯಸ್ 111 ಎಸೆತ ಎದುರಿಸಿ 3 ಸಿಕ್ಸರ್ 10 ಬೌಂಡರಿ ಸಮೇತ 95 ರನ್ ಗಳಿಸಿದರು. ಆದರೆ ಶತಕ ಪೂರೈಸಲಾಗದೇ ನಿರಾಸೆ ಅನುಭವಿಸಿದರು. ಇನ್ನೊಂದೆಡೆ ಮುಶೀರ್ ಖಾನ್ 135 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇತ್ತೀಚೆಗೆ ರಣಜಿ ಟ್ರೋಫಿ ಆಡಲು ಕುಂಟು ನೆಪ ಹೇಳಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಶ‍್ರೇಯಸ್ ವಾರ್ಷಿಕ ಗುತ್ತಿಗೆಯಿಂದಲೂ ಹೊರಬಿದ್ದಿದ್ದರು. ಇದರ ಬೆನ್ನಲ್ಲೇ ಅವರು ರಣಜಿಯಲ್ಲಿ ಮಿಂಚಿರುವುದು ವಿಶೇಷ. ಇನ್ನೊಂದು ವಿಶೇಷವೆಂದರೆ ಭಾರತ ತಂಡದಿಂದ ಅವಗಣನೆಗೆ ಗುರಿಯಾಗಿರುವ ಮತ್ತೊಬ್ಬ ಹಿರಿಯ ಆಟಗಾರ ಅಜಿಂಕ್ಯಾ ರೆಹಾನೆ ಕೂಡಾ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, 73 ರನ್ ಗಳಿಸಿ ಔಟಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ