ಚೀನಾ ಗಡಿ ಒಪ್ಪಂದವನ್ನು ಕಡೆಗಣಿಸಿದೆ: ಜೈಶಂಕರ್

ಸೋಮವಾರ, 22 ಆಗಸ್ಟ್ 2022 (07:02 IST)
ಬ್ರೆಸಿಲಿಯಾ : ಚೀನಾ ಭಾರತದೊಂದಿಗಿನ ಗಡಿ ಒಪ್ಪಂದವನ್ನು ಕಡೆಗಣಿಸಿದೆ. ಗಲ್ವಾನ್ ಕಣಿವೆಯ ಬಿಕ್ಕಟ್ಟಿನಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಡುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದರು.

ಬ್ರೆಜಿಲ್ನ ಸಾವೋ ಪಾಲೋದಲ್ಲಿ ಭಾರತೀಯ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೈಶಂಕರ್ ಈ ವೇಳೆ ಮಾತನಾಡಿ, ನಾವು 1990ರ ದಶಕದಿಂದ ಚೀನಾದೊಂದಿಗೆ ಗಡಿ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಪಡೆಗಳನ್ನು ನಿಯೋಜಿಸುವುದನ್ನು ನಿಷೇಧಿಸುವ ಒಪ್ಪಂದ ಮಾಡಿಕೊಂಡಿದ್ದೇವೆ.

ಆದರೆ ಅವರು ಆ ಒಪ್ಪಂದವನ್ನು ನಿರ್ಲಕ್ಷಿಸಿದ್ದಾರೆ. ಗಲ್ವಾನ್ ಕಣಿವೆಯಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ತಿಳಿಸಿದರು.

ಭಾರತ-ಚೀನಾ ನಡುವಿನ ಗಡಿ ಪರಿಸ್ಥಿತಿ ಕುರಿತು ಮಾತನಾಡಿದ ಜೈಶಂಕರ್, ಸಂಬಂಧಗಳು ಏಕಮುಖವಾಗಿರಬಾರದು. ಸಂಬಂಧಗಳನ್ನು ಉಳಿಸಿಕೊಳ್ಳಲು ಪರಸ್ಪರ ಗೌರವ ಇರುವುದು ಮುಖ್ಯ. ಅವರು ನಮ್ಮ ನೆರೆಹೊರೆಯವರು. ಪ್ರತಿಯೊಬ್ಬರೂ ನೆರೆಹೊರೆಯವರೊಂದಿಗೆ ಬೆರೆಯಲು ಬಯಸುತ್ತಾರೆ. ಅದು ವೈಯಕ್ತಿಕ ಜೀವನ, ದೇಶಗಳ ನಡುವೆಯೂ ಅನ್ವಯಿಸುತ್ತದೆ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ