ಸಾಹಿತ್ಯ ಸಮ್ಮೇಳನ : ನುಡಿ ತೇರಿನ ಪ್ರಚಾರ ರಥ ಹೇಗಿದೆ?

ಗುರುವಾರ, 30 ಜನವರಿ 2020 (21:22 IST)
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕಲಬುರಗಿ ಜಿಲ್ಲೆಯಲ್ಲಿ ಅಕ್ಷರ ಜಾತ್ರೆ ಕುರಿತು ಜನಜಾಗೃತಿ ಮೂಡಿಸಲು ಮತ್ತು ನುಡಿ ಸಮ್ಮೇಳನಕ್ಕೆ ಆಹ್ವಾನಿಸುವ ವಿಶೇಷ ವಿನ್ಯಾಸದ ಪ್ರಚಾರ ರಥಕ್ಕೆ ಚಾಲನೆ ನೀಡಲಾಗಿದೆ.

ಕಲಬುರಗಿಯಲ್ಲಿ ಫೆಬ್ರವರಿ 5 ರಿಂದ 7ರ ವರೆಗೆ ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅದರ ಅಂಗವಾಗಿ ಪ್ರಚಾರ ರಥಕ್ಕೆ ವಿಧಾನಸಭೆಯ ಶಾಸಕರಾದ ಖನೀಸ್ ಫಾತಿಮಾ, ಎಂ.ವೈ.ಪಾಟೀಲ ಹಾಗೂ ವಿಧಾನ ಪರಿಷತ್ತಿನ ಶಾಸಕ ತಿಪ್ಪಣಪ್ಪ ಕಮಕನೂರ ಚಾಲನೆ ನೀಡಿದ್ರು.

ಪ್ರಚಾರ ಸಮಿತಿಯಿಂದ ಸಿದ್ದಪಡಿಸಲಾದ ತಾಯಿ ಭುವನೇಶ್ವರಿ ಭಾವಚಿತ್ರ ಒಳಗೊಂಡ ಅನುಭವ ಮಂಟಪದ ಮಾದರಿಯ ಈ ಭವ್ಯ ಪ್ರಚಾರ ರಥವು ನೋಡುಗರ ಗಮನ ಸೆಳೆಯುತ್ತಿದೆ. 

ಈ ಭವ್ಯ ಪ್ರಚಾರ ರಥವು ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕಾ ಕೇಂದ್ರಸ್ಥಾನ, ಪ್ರಮುಖ ಹೋಬಳಿ ಮತ್ತು ಹೆದ್ದಾರಿಗಳಲ್ಲಿ ಸಂಚರಿಸಿ ನುಡಿ ಜಾತ್ರೆಗೆ ಆಹ್ವಾನ ನೀಡಲಿದೆ. ರಥದಲ್ಲಿ ಸಮ್ಮೇಳನದ ಪ್ರಚಾರ ಸಾಮಗ್ರಿಗಳಾದ ಪೋಸ್ಟರ್ ಮತ್ತು ಕರಪತ್ರಗಳಿದ್ದು, ಸಿಬ್ಬಂದಿಗಳು ಇದನ್ನು ಪ್ರತಿ ಊರಿನಲ್ಲಿ ಸಾರ್ವಜನಿಕರಿಗೆ ಹಂಚಲಿದ್ದಾರೆ.

ಇದಲ್ಲದೆ ನುಡಿ ಜಾತ್ರೆಯ ಪ್ರಚಾರದ ಜಿಂಗಲ್ಸ್ ಹಾಡುಗಳು, ಬಾರಿಸು ಕನ್ನಡ ಡಿಂಡಿಮವಾ ಓ ಕರ್ನಾಟಕ ಹೃದಯ ಶಿವ, ನುಡಿ ತೇರ, ಹೀಗೆ ಕನ್ನಡಾಭಿಮಾನ ಹೆಚ್ಚಿಸುವ ಗೀತೆಗಳನ್ನು ರಥವು ಪ್ರಸಾರ ಮಾಡುತ್ತಾ ಕನ್ನಡಿಗರಲ್ಲಿ ನಾಡಿನ ನೆಲ-ಜಲ ಭಾಷೆಯ ಬಗ್ಗೆ ಅಭಿಮಾನ ಮೂಡಿಸಲಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ