"ಸಿದ್ದರಾಮೋತ್ಸವ" ಕಾಂಗ್ರೆಸ್ ನಲ್ಲಿ ಬಿನಭಿಪ್ರಾಯ..!!!

ಗುರುವಾರ, 14 ಜುಲೈ 2022 (15:01 IST)
ಸಿದ್ದರಾಮೋತ್ಸವ' ಕುರಿತಂತೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಗಳು, ಬಣ ಬಡಿದಾಟ ಮುನ್ನಲೆಗೆ ಬಂದಿದೆ. ಬೆಂಗಳೂರಿನ ಎರಡು ಸ್ಥಳಗಳಲ್ಲಿ ನಿನ್ನೆ ಪಕ್ಷದ ಮುಖಂಡರು ಏಕಕಾಲದಲ್ಲಿ ಎರಡು ಸಭೆಗಳನ್ನು ನಡೆಸುವ ಮೂಲಕ ಅದು ಜಗಜ್ಜಾಹೀರಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗ ಪಕ್ಷದ ಹಲವು ಮುಖಂಡರು ಅರಮನೆ ಮೈದಾನದಲ್ಲಿ 'ಸಿದ್ದರಾಮೋತ್ಸವ' ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಂಡಿದ್ದರೆ, ಡಿಕೆ ಶಿವಕುಮಾರ್ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಗಳ ರೂಪುರೇಷೆ ಕುರಿತು ಚರ್ಚಿಸಲು ಇತರ ನಾಯಕರೊಂದಿಗೆ ಸಭೆ ನಡೆಸುವಲ್ಲಿ ನಿರತರಾಗಿದ್ದರು. ಈಶ್ವರ ಖಂಡ್ರೆ, ಕೆ.ಜೆ.ಜಾರ್ಜ್ ಅವರಂತಹ ಕೆಲವೇ ನಾಯಕರು ಎರಡೂ ಸಭೆಗಳಲ್ಲಿ ಭಾಗಿಯಾಗಿದ್ದರು.
 
ಸಿದ್ದರಾಮಯ್ಯ ಅವರ 75 ನೇ ಹುಟ್ಟುಹಬ್ಬವನ್ನು ಆಚರಿಸಲು ಅವರ ಬೆಂಬಲಿಗರು ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಸಾರ್ವಜನಿಕ ಸಭೆ ಸಿದ್ದರಾಮೋತ್ಸವವನ್ನು ಆಯೋಜಿಸಿದ್ದಾರೆ. ನಿನ್ನೆ ಈ ಬಗ್ಗೆ ಮಾಧ್ಯಮದವರು ಶಿವಕುಮಾರ್ ಅವರನ್ನು ಕೇಳಿದಾಗ, ತಮ್ಮ ಹೆಸರಿನಲ್ಲಿ ಯಾವುದೇ ಆಚರಣೆಗಳನ್ನು ಬೇಕಾಗಿಲ್ಲ, ಅದನ್ನು ನಾನು ಬಯಸುವುದಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕಾಂಗ್ರೆಸೋತ್ಸವ ಮಾಡಲು ಬಯಸುತ್ತೇನೆ ಎಂದು ಹೇಳಿದ್ದರು. ಅವರ ಸಹೋದರ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರು 'ಸಿದ್ದರಾಮೋತ್ಸವ'ದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅರಮನೆ ಮೈದಾನದ ಸಭೆಯಲ್ಲಿ ಮಾತನಾಡಿದ ಅವರು, 'ಸಿದ್ದರಾಮೋತ್ಸವ' ಮೂಲಕ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗಬಾರದು. ನಾವು ಈಗ ಚುನಾವಣಾ ವರ್ಷದಲ್ಲಿದ್ದೇವೆ ಎಂದು ಹೇಳಿದ್ದಾರೆ. ಈ ಕಾರ್ಯಕ್ರಮದಿಂದ ಪಕ್ಷಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ