ರೇವಣ್ಣನಿಗಾಗಿ ಮಾತ್ರ ಹೋರಾಟ ಮಾಡ್ತೀನಿ, ಪ್ರಜ್ವಲ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಕುಮಾರಸ್ವಾಮಿ

Krishnaveni K

ಬುಧವಾರ, 8 ಮೇ 2024 (14:41 IST)
ಬೆಂಗಳೂರು: ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಎಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ರೇವಣ್ಣ ಪರವಾಗಿ ಮಾತ್ರ ಹೋರಾಟ ಮಾಡುತ್ತೇನೆ, ಪ್ರಜ್ವಲ್ ಗಾಗಿ ಮಾಡಲ್ಲ ಎಂದಿದ್ದಾರೆ.

ಮಹಿಳೆಯ ಅಪಹರಣ ಆರೋಪದಲ್ಲಿ ಎಸ್ಐಟಿ ತಂಡ ಎಚ್ ಡಿ ರೇವಣ್ಣರನ್ನು ಅರೆಸ್ಟ್ ಮಾಡಿದೆ. ಸಹೋದರನ ಬಂಧನದ ಬಗ್ಗೆ  ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ರೇವಣ್ಣಗೆ ಮಾತ್ರ ನೋಟಿಸ್ ನೀಡಲಾಗಿದೆ. ಈ ವಿಡಿಯೋ ಹರಿಯಬಿಟ್ಟ ಕಾರ್ತಿಕ್, ನವೀನ್, ಶ್ರೇಯಸ್ ಗೆ ಯಾಕೆ ನೋಟಿಸ್ ನೀಡಿಲ್ಲ.  ಡಿಕೆ ಶಿವಕುಮಾರ್ ಸಂಸ್ಕೃತಿ ಎಲ್ಲರಿಗೂ ಗೊತ್ತಿದೆ. ದೇವರಾಜೇಗೌಡ ಜೊತೆ ಮಾತನಾಡುವ ಅಗತ್ಯ ನಿನಗೇನಿತ್ತು? ಮುಖ್ಯಮಂತ್ರಿಗೆ ಮಾನ ಮರ್ಯಾದೆ ಇದೆಯಾ? ಪರಮೇಶ್ವರ ನಿಮಗೆ ಬೆನ್ನು ಮೂಳೆ ಇದ್ಯಾ? ಎಸ್ಐಟಿ ಅಧಿಕಾರಿಗಳಿಗೆ ಬದ್ಧತೆ ಇದೆಯಾ? ಯಾವ ಪ್ರಕರಣವನ್ನು ತಾರ್ಕಿಕವಾಗಿ ಅಂತ್ಯ ಹಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ರೇವಣ್ಣ ಪರವಾಗಿ ಮಾತ್ರ ಹೋರಾಟ ಮಾಡುತ್ತೇನೆ. ಪ್ರಜ್ವಲ್ ಪರವಾಗಿ ಹೋರಾಟ ಮಾಡಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ರೇವಣ್ಣ ಪರವಾಗಿ ಶಾಸಕಾಂಗ ಪಕ್ಷದ ನಾಯಕನಾಗಿ ಹೋರಾಟ ಮಾಡುತ್ತೇನೆ ಹೊರತು ಸಂಬಂಧಿಕನಾಗಿ ಅಲ್ಲ ಎಂದಿದ್ದಾರೆ.

ಇನ್ನು, ಪ್ರಜ್ವಲ್ ರೇವಣ್ಣ ಎಲ್ಲಿ ಹೋಗಿದ್ದಾರೆ, ಯಾವಾಗ ವಾಪಸ್ ಬರುತ್ತಾರೆ ಎಂಬ ಮಾಹಿತಿ ನನಗಿಲ್ಲ ಎಂದಿದ್ದಾರೆ. ನೀವು ಏನು ತೋರಿಸುತ್ತಿದ್ದೀರೋ ಅದಷ್ಟೇ ನನಗೆ ಗೊತ್ತು. 15 ಕ್ಕೆ ವಾಪಸ್ ಬರುತ್ತಾರೆ ಎನ್ನುತ್ತಿದ್ದಾರೆ ನೋಡೋಣ ಎಂದು ಮಾಧ್ಯಮಗಳಿಗೆ ಕುಮಾರಸ್ವಾಮಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ