ಸಿಲ್ಕ್ಯಾರಾ ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರಿಗೆ ಪ್ರಧಾನಿ ಮೋದಿ ಫೋನ್ ಕರೆ

ಬುಧವಾರ, 29 ನವೆಂಬರ್ 2023 (10:40 IST)
ನವದೆಹಲಿ: ಸಿಲ್ಕ್ಯಾರಾ ಸುರಂಗದಿಂದ ರಕ್ಷಿಸಲ್ಪಟ್ಟ 41 ಕಾರ್ಮಿಕರ ಜೊತೆ ಪ್ರಧಾನಿ ಮೋದಿ ಖುದ್ದಾಗಿ ಫೋನ್ ಕರೆ ಮಾಡಿ ಮಾತನಾಡಿದ್ದಾರೆ.

ನವಂಬರ್ 12 ರಂದು ಉತ್ತರ ಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿದು 41 ಕಾರ್ಮಿಕರು ಅದರೊಳಗೆ ಸಿಲುಕಿಕೊಂಡಿದ್ದರು. 17 ದಿನಗಳ ಸತತ ಕಾರ್ಯಾಚಾರಣೆಯ ಬಳಿಕ ಎಲ್ಲಾ ಕಾರ್ಮಿಕರನ್ನು ಸುರಕ್ಷಿತವಾಗಿ ನಿನ್ನೆ ರಕ್ಷಿಸಲಾಯಿತು.

ಕಾರ್ಮಿಕರು ಹೊರಬಂದ ಕೂಡಲೇ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಕೇಂದ್ರ ಸಚಿವ ಜನರಲ್ (ನಿವೃತ್ತ) ವಿಕೆ ಸಿಂಗ್ ಹೂ ಮಾಲೆ ಹಾಕಿ ಬರಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ಕೂಡಾ ಸೋಷಿಯಲ್ ಮೀಡಿಯಾ ‘ಎಕ್ಸ್’ ಮೂಲಕ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಲ್ಲದೆ, ಕಾರ್ಮಿಕರಿಗೂ ಹಾರೈಸಿದ್ದರು.

ರಕ್ಷಿಸಲ್ಪಟ್ಟ ಎಲ್ಲಾ 41 ಕಾರ್ಮಿಕರನ್ನು ಒಂದೇ ಕಡೆ ಇರಿಸಲಾಗಿತ್ತು. ಅವರಿಗೆ ಕರೆ ಮಾಡಿದ ಪ್ರಧಾನಿ ಮೋದಿ ಆರೋಗ್ಯ ವಿಚಾರಿಸಿದ್ದಾರೆ. ರಕ್ಷಿಸಲ್ಪಟ್ಟ ಎಲ್ಲಾ ಕಾರ್ಮಿಕರಿಗೆ ಉತ್ತರಾಖಂಡ ಸರ್ಕಾರ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ